ಬೆಂಗಳೂರು: ಸಹೋದ್ಯೊಗಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣವನ್ನು ಎದುರಿಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯೆ ಸಂಪಾದಕ ರವಿ ಬೆಳಗೆರೆಗೆ ಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
65ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಬುಧವಾರ ಮಧ್ಯಾಹ್ನ ವಕೀಲ ದಿವಾಕರ್, ಬೆಳಗೆರೆ ಅವರು ತೀವ್ರ ಆನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ನಾವು ಜಾಮೀನು ಅರ್ಜಿಯೇ ಸಲ್ಲಿಸಿಲ್ಲ. ಆದರೆ ಆದರೆ ಸಿಸಿಬಿಯವರು ನಾವು ಜಾಮೀನು ಅರ್ಜಿ ಸಲ್ಲಿಸುವ ಮೊದಲೇ ಜಾಮೀನು ಸಿಗಬಾರದು ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಸ್ವ ಹಿತಾಸಕ್ತಿ ತೋರಿಸುತ್ತಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ. ಈ ವಿಚಾರ ನಿರಂತರವಾಗಿ ಮಾಧ್ಯಮದಲ್ಲಿ ಬರುತ್ತಿದೆ ಎಂದಾಗ ನ್ಯಾ. ಮಧುಸೂದನ್ ಅವರು ನಾನು ನ್ಯೂಸ್ ಚಾನೆಲ್ ನೋಡೇ ಇಲ್ಲ ಎಂದು ಚಟಾಕಿ ಹಾರಿಸಿದರು. ಇದಕ್ಕೆ ದಿವಾಕರ್, ನ್ಯೂಸ್ ನೋಡಿ ನಿಮ್ಮನ್ನು ಕೇಳುತ್ತಿಲ್ಲ. ನನ್ನ ಅರಿವಿಗೆ ಬಂತು ಅದಕ್ಕೆ ನಾನು ಕೇಳಿದೆ ಎಂದು ತಿಳಿಸಿದರು. ( ಇದನ್ನೂ ಓದಿ: ಸುನಿಲ್ ಹೆಗ್ಗರವಳ್ಳಿ ವಿರುದ್ಧ ಮೊದಲ ಬಾರಿಗೆ ಸಿಡಿದ ಯಶೋಮತಿ )
ಗೌರಿಲಂಕೇಶ್ ಹತ್ಯೆ ವಿಚಾರಣೆಯಲ್ಲಿ ತಾಹಿರ್ ಸಿಕ್ಕಿದ, ತಾಹಿರ್ ಹೇಳಿಕೆಯ ಮೇಲೆ ಶಶಿಧರ್ ಬಂಧನ ಆಯ್ತು. ಆತ ಕೊಟ್ಟ ಸುಳಿವಿನ ಆಧಾರದ ಮೇಲೆ ಶಶಿಧರ್ರಿಂದ ರವಿಬೆಳೆಗೆರೆ ಬಂಧನ ಆಯ್ತು. ಆದರೆ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎನ್ನುವ ಅಂಶಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ಮಾಡಲೇ ಇಲ್ಲ. ರವಿ ಬೆಳಗೆರೆ ಅವರನ್ನು ತಕ್ಷಣ ಬಂಧನ ಮಾಡಿದರು. ಆದರೆ ಈಗ ಬೆಳಗೆರೆ ಅವರಿಗೆ ಅನಾರೋಗ್ಯ ಹೆಚ್ಚಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅಲ್ಲಿ ಸರಿಯಾದ ಚಿಕಿತ್ಸೆ ಭರವಸೆ ಇಲ್ಲ. ಪ್ರಕರಣವನ್ನು ಸಂಪೂರ್ಣವಾಗಿ ತಿರುಚುತ್ತಿದ್ದಾರೆ ಎನ್ನುವ ಅಭಿಪ್ರಾಯ ಇದೆ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿ ಎಂದು ದಿವಾಕರ್ ಮನವಿ ಮಾಡಿದರು.
ಈ ವೇಳೆ ಈಗ ರವಿ ಬೆಳಗೆರೆ ಎಲ್ಲಿದ್ದಾರೆ ಎಂದು ಜಡ್ಜ್ ಪ್ರಶ್ನೆ ಕೇಳಿದರು. ದಿವಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಉತ್ತರಿಸಿದರು. ದಿವಾಕರ್ ವಾದವನ್ನು ಅಲಿಸಿದ ನ್ಯಾ. ಮಧುಸೂದನ್ ತೀವ್ರ ಅನಾರೋಗ್ಯ ಕಾರಣದಿಂದಾಗಿ ಬೆಳಗೆರೆಗೆ ಷರತ್ತು ಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಪ್ರಕಟಿಸಿದರು. 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ, ಸಾಕ್ಷಿನಾಶ ಮಾಡಬಾರದು, ತನಿಖೆಗೆ ಸಹಕರಿಸುವಂತೆ ನ್ಯಾಯಾಧೀಶರ ಸೂಚನೆ ನೀಡಿ ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಜಾಮೀನು ಮಂಜೂರು ಮಾಡಿದರು. (ಇದನ್ನೂ ಓದಿ: ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ )
ಜಾಮೀನು ಸಿಕ್ಕಿದ ಬಳಿಕ ಪ್ರತಿಕ್ರಿಯಿಸಿದ ಬೆಳಗೆರೆ ಪರ ವಕೀಲ ದಿವಾಕರ್, 140 ಪುಟಗಳ ಪೂರಕ ದಾಖಲಾತಿ ಒದಗಿಸಿದ್ವಿ. ಹೀಗಾಗಿ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಸಿಸಿಬಿ ಪೊಲೀಸರು ರವಿ ಬೆಳಗೆರೆಯನ್ನು ಬಂಧಿಸಿ ಸೋಮವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್ ಬೆಳಗೆರೆ ಅವರಿಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು. ಈ ಆದೇಶ ಪ್ರಕಟವಾದ ಬಳಿಕ ರವಿ ಬೆಳಗೆರೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.