ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ವಿಮಾನದಲ್ಲಿ ವಾರಾಣಸಿಗೆ ತೆರಳಿದ್ದಾರೆ. ವಾರಾಣಸಿಯಲ್ಲಿ ನಾಳೆ ನಡೆಯಲಿರುವ ಸುಶಾಸನ ಸಂಗಮ್ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಇದಕ್ಕೂ ಮುನ್ನ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬೊಮ್ಮಾಯಿ, ನಾನು ಇವತ್ತು ವಾರಾಣಸಿಗೆ ಹೋಗ್ತಿದ್ದೇನೆ. ವಾರಾಣಸಿಯಲ್ಲಿ ಎಲ್ಲಾ ಬಿಜೆಪಿ ಮುಖ್ಯಮಂತ್ರಿಗಳ ಸಮ್ಮೇಳನ ಇದೆ. ಅಲ್ಲಿ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಬಗ್ಗೆ ಚರ್ಚೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಬಳಿಕ ನಾಳೆ ವಾಪಸ್ ಆಗುತ್ತೇನೆ ಎಂದು ಹೇಳಿದರು.
ಸಂಜೆ 4.45ಕ್ಕೆ ವಾರಾಣಸಿಯ ಬಬತ್ಪುರದಲ್ಲಿರುವ ಲಾಲ್ ಬಹಾದುರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ಅವರು ಬಳಿಕ ರಸ್ತೆ ಮಾರ್ಗವಾಗಿ ತೆರಳಿ ಸಂಜೆ 5.15ಕ್ಕೆ ವಾರಾಣಸಿಯನ್ನು ತಲುಪಲಿದ್ದಾರೆ. ಇಂದು ವಾರಾಣಸಿಯ ತಾಜ್ ಗಂಗೇಸ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಬೆಳಗ್ಗೆ 9.30ಕ್ಕೆ ವಾರಾಣಸಿಯ ಬನಾರಸ್ ಲೋಕೋಮೋಟಿವ್ ವಕ್ರ್ಸ್ಗೆ ಆಗಮಿಸುವ ಅವರು 10ರಿಂದ 2 ಗಂಟೆಯವರೆಗೆ ಸುಶಾಸನ್ ಸಂಗಮ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್ಗೆ MES ಕರೆ – ಬಂದ್ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್
ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಹೊರಡುವ ಅವರು 3.25ಕ್ಕೆ ಬಬತ್ಪುರದಲ್ಲಿರುವ ಲಾಲ್ ಬಹಾದುರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಸಂಜೆ 5.45ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಇದನ್ನೂ ಓದಿ: ಬೇಲಿ ಹಾರಿಯಾದರೂ ಸುವರ್ಣಸೌಧ ಮುತ್ತಿಗೆ – ಸರ್ಕಾರಕ್ಕೆ ಕೋಡಿಹಳ್ಳಿ ಗಡುವು