ಸುಂದರ ಪ್ರೇಮ ಕಥೆಯನ್ನು, ಮನಮುಟ್ಟುವ ಮ್ಯೂಸಿಕ್ ಸ್ಪರ್ಶದೊಂದಿಗೆ ಪ್ರೇಕ್ಷಕರೆದುರು ತೆರೆದಿಡಲು, ಹೊಸಫೀಲ್ ಕೊಡಲು ನಿರ್ದೇಶಕ ವಾಸುದೇವ್ ರೆಡ್ಡಿ ಸಜ್ಜಾಗಿ ನಿಂತಿದ್ದಾರೆ.
ವಾಸುದೇವ್ ರೆಡ್ಡಿ ಅವರ ಮೊದಲ ಕನಸಿನ ಸಿನಿಮಾ ತೆರೆ ಮೇಲೆ ಬರಲು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಅದುವೇ ‘ಮೈಸೂರು’ ಸಿನಿಮಾ. ಹಾಯ್ ಎನಿಸುವ ಹಾಡು ವಾವ್ ಎನಿಸುವ ಟ್ರೇಲರ್ ಮೂಲಕ ಎಲ್ಲ ಚಿತ್ರ ಪ್ರೇಮಿಗಳ ಮನದಲ್ಲೂ ಚಿತ್ರ ನೋಡಲೇ ಬೇಕು ಎನ್ನುವ ಇಂಗಿತ ಸೃಷ್ಟಿಸಿರುವ ‘ಮೈಸೂರು’ ಸಿನಿಮಾ ಮಾರ್ಚ್ 4ರಂದು ಬೆಳ್ಳಿ ಪರದೆ ಮೇಲೆ ಅನಾವರಣವಾಗಲಿದೆ. ಇದನ್ನೂ ಓದಿ: ಭಾಸ್ಕರ್.ವಿ.ರೆಡ್ಡಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ‘ಮೈಸೂರು’
‘ಮೈಸೂರು’ ಸಿನಿಮಾ ಅನಿವಾಸಿ ಕನ್ನಡಿಗನೊಬ್ಬನ ಪ್ರೀತಿ ಕಥೆಯನ್ನು ತೆರೆ ಮೇಲೆ ತೆರೆದಿಡಲಿದೆ. ಅದು ಕೇವಲ ಪ್ರೀತಿಕಥೆಯನ್ನು ಮಾತ್ರ ಹೇಳದೇ ರೋಚಕ ಟ್ವಿಸ್ಟ್ ಜೊತೆಗೆ ಒಂದೊಳ್ಳೆ ಸಂದೇಶವನ್ನು ನೋಡುಗರಿಗೆ ಮುಟ್ಟಿಸಲಿದೆ. ಒಡಿಶಾ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಂಹಿತ್ ಈ ಚಿತ್ರದ ನಾಯಕ. ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಪೂಜ ಚಿತ್ರದ ನಾಯಕಿ. ಮೈಸೂರಿನಲ್ಲಿ ನಡೆಯುವ ಈ ಪ್ರೀತಿ ಕಥೆಗೆ ಮೈಸೂರಿನವರೇ ಆದ ವಾಸುದೇವ್ ರೆಡ್ಡಿ ನಿರ್ದೇಶಕರು. ಇದು ಇವರ ನಿರ್ದೇಶನಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ಕೂಡ ಹೌದು. ಮೊದಲ ಚಿತ್ರಕ್ಕೆ ಚೆಂದದ ಕಥೆ ರೆಡಿ ಮಾಡಿಕೊಂಡು ಚಿತ್ರಕಥೆಯನ್ನು ಕಲರ್ ಫುಲ್ ಆಗಿ ಹೆಣೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ ನಿರ್ದೇಶಕರು.
ಒಡಿಶಾ ಹಾಗೂ ಮೈಸೂರು ನಡುವೆ ನಡೆಯುವ ಪ್ರೀತಿಕಥೆಯಲ್ಲಿ ಮ್ಯೂಸಿಕ್ ಕೂಡ ಪ್ರಮುಖ ಪಾತ್ರ ವಹಿಸಿದ್ದು, ಒಟ್ಟು ಐದು ಹಾಡುಗಳು ಚಿತ್ರದಲ್ಲಿವೆ. ಒಂದಕ್ಕಿಂತ ಒಂದು ಹಾಡು ಡಿಫ್ರೆಂಟ್ ಆಗಿ ಮೂಡಿ ಬಂದಿದ್ದು ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್ ಸೇರಿ ಮೂವರು ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕೃಷ್ಣ ಮಳವಳ್ಳಿ ಸಂಭಾಷಣೆ, ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಚಿತ್ರಕ್ಕಿದೆ. ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಅದ್ಭುತವಾಗಿ ತೆರೆ ಮೇಲೆ ಮೂಡಿಬಂದಿವೆ. ಚಿತ್ರದ ಸಾಹಸ ದೃಶ್ಯಕ್ಕೆ ಶ್ರೀಕಾಂತ್ ನಿರ್ದೇಶನವಿದೆ. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!
ಚಿತ್ರದಲ್ಲಿ ಮೈಸೂರಿನ ಹಲವು ಭಾಗಗಳನ್ನು ಭಾಸ್ಕರ್ ವಿ ರೆಡ್ಡಿ ಕ್ಯಾಮೆರಾ ಕಣ್ಣಲಿ ಸೊಗಸಾಗಿ ಸೆರೆ ಹಿಡಿಯಲಾಗಿದ್ದು, ಉಳಿದಂತೆ ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ನಲ್ಲೂ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಎಸ್.ಆರ್ ಕಂಬೈನ್ಸ್ ಬ್ಯಾನರ್ ನಡಿ ನಿರ್ದೇಶಕ ವಾಸುದೇವ ರೆಡ್ಡಿಯವರೇ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜಗದೀಶ್, ಕೆ.ಆರ್ ಅಪ್ಪಾಜಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಚಿತ್ರದ ತಾರಾಬಳಗ ಕೂಡ ಅಷ್ಟೇ ಕಲರ್ ಫುಲ್ ಆಗಿದ್ದು ಜ್ಯೂನಿಯರ್ ನರಸಿಂಹರಾಜು, ಸತ್ಯಜಿತ್, ಕುರಿಪ್ರತಾಪ್, ಭಾಸ್ಕರ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಒಳಗೊಂಡ ಹಲವು ಕಲಾವಿದರು ಅಭಿನಯಿಸಿದ್ದಾರೆ.