ಮುಂಬೈ: ಟಿ20 ವಿಶ್ವಕಪ್ (T20 WorldCup) ಸೋಲಿಗೆ ಅಸಮರ್ಪಕ ಆಯ್ಕೆ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದ್ದಂತೆ, ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನೇ ಬಿಸಿಸಿಐ (BCCI) ವಜಾ ಮಾಡಿದೆ.
ಬಿಸಿಸಿಐ ಹಿರಿಯ ರಾಷ್ಟ್ರೀಯ ಆಟಗಾರರ ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮಾ (Chetan Sharma) ಸೇರಿ ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಮತ್ತು ದೇಬಾಶಿಶ್ ಮೊಹಂತಿ ಸಹ ಇದ್ದರು. ಇದೀಗ ಸಮಿತಿಯನ್ನ ವಿಸರ್ಜಿಸಿರುವ ಬಿಸಿಸಿಐ ಹೊಸ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 28 ರಂದು ಕೊನೆಯ ದಿನವಾಗಿದ್ದು, ಅಂದು ಸಂಜೆ 6 ಗಂಟೆ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ: ಅರಬ್ಬರ ನಾಡಲ್ಲಿ ಫಿಫಾ ಜ್ವರ – ಕಾಲ್ಚಳಕದ ಆಟಕ್ಕಿಲ್ಲ ಮದ್ಯದ ಅಮಲು
ಏನೇನು ಮಾನದಂಡಗಳು?
ಅರ್ಜಿ ಸಲ್ಲಿಸುವವರು ಕನಿಷ್ಠ 7 ಟೆಸ್ಟ್ ಮ್ಯಾಚ್ ಮತ್ತು 30 ಫಸ್ಟ್ ಕ್ಲಾಸ್ ಮ್ಯಾಚ್ (ಪ್ರಥಮದರ್ಜೆಯ ಕ್ರಿಕೆಟ್ ಪಂದ್ಯ) ಅಥವಾ 10 ಏಕದಿನ ಪಂದ್ಯ ಮತ್ತು 20 ಫಸ್ಟ್ ಕ್ಲಾಸ್ ಮ್ಯಾಚ್ ಆಡಿರಬೇಕು. ಅಲ್ಲದೆ ಅಭ್ಯರ್ಥಿಗಳು ಕನಿಷ್ಠ 5 ವರ್ಷಗಳ ಹಿಂದೆ ಆಟದಿಂದ ನಿವೃತ್ತರಾಗಿರಬೇಕು ಎಂದು ಬಿಸಿಸಿಐ (BCCI) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ಸ್ಟೇಡಿಯಂಗಳಲ್ಲಿ ಬಿಯರ್ ಬ್ಯಾನ್ – ಫ್ಯಾನ್ಸ್ಗೆ ಶಾಕ್ ಕೊಟ್ಟ ಕತಾರ್
ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಇಂಗ್ಲೆಂಡ್ (England) ವಿರುದ್ಧ ಟೀಂ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು. 2013ರ ಬಳಿಕ ಐಸಿಸಿ (ICC) ಟ್ರೋಫಿ ಗೆಲ್ಲುವ ಕನಸು ಮತ್ತೆ ನುಚ್ಚು ನೂರಾಗಿತ್ತು. ಇದರಿಂದ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಎಲ್ಲಾ ಆಟಗಾರರನ್ನು ಕಿತ್ತೆಸೆದು ಯುವ ಕ್ರಿಕೆಟಿಗರಿಗೆ ಮಣೆಹಾಕಲು ಅಭಿಮಾನಿಗಳು ಸೂಚಿಸಿದ್ದರು.
ಇತ್ತ ಬಿಸಿಸಿಐ ಸೋಲಿಗೆ ಕಾರಣ ಹೇಳುವಂತೆ ನಾಯಕ, ಕೋಚ್, ಆಯ್ಕೆ ಸಮಿತಿಗೆ ಸೂಚಿಸಿತ್ತು. ಅಸಮರ್ಪಕ ಆಯ್ಕೆ ಕೂಡ ಸೋಲಿಗೆ ಪ್ರಮುಖ ಕಾರಣ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಸಭೆ ಸೇರಿದ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನೇ ವಜಾ ಮಾಡಿದೆ.