ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಮೇ ಮೂರನೇ ವಾರ ಪ್ರಕಟ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯವಾಗಿದೆ. ಫಲಿತಾಂಶದ ತಯಾರಿ ಮಾಡಲಾಗುತ್ತಿದೆ. ಮೂರನೇ ವಾರ ಫಲಿತಾಂಶ ಪ್ರಕಟ ಮಾಡುತ್ತೇವೆ. ಶೀಘ್ರವೇ ದಿನಾಂಕ ಪ್ರಕಟ ಮಾಡುತ್ತೇವೆ ಎಂದು ತಿಳಿಸಿದರು.
ಮೇ 16 ರಿಂದಲೇ ಶಾಲೆಗಳು ಪ್ರಾರಂಭವಾಗಲಿವೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ತಿಳಿಸಿದರು. ಎಂಎಲ್ಸಿಗಳು, ಸಭಾಪತಿಗಳು, ಎಂಎಲ್ಎಗಳು ಪತ್ರ ಬರೆದು ಹೆಚ್ಚು ಬಿಸಿಲು ಇರುತ್ತೆ ಶಾಲೆ ಪ್ರಾರಂಭ ಮುಂದಕ್ಕೆ ಹಾಕಿ ಅಂತ ಮನವಿ ಮಾಡಿದ್ದಾರೆ. ಆದರೆ ನಾವು ಹವಾಮಾನ ಇಲಾಖೆ ವರದಿ ಪಡೆದಿದ್ದೇವೆ. ಪ್ರತಿ ವರ್ಷದಂತೆ ಈ ವರ್ಷವೂ ಅದೇ ಪ್ರಮಾಣದಲ್ಲಿ ಬಿಸಿಲು ಇರಲಿದೆ. ಹೀಗಾಗಿ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಎರಡು ವರ್ಷ ಕೊರೊನಾದಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಕ್ಕಿಲ್ಲ. ಹೀಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನ ಮಾಡ್ತಿದ್ದೇವೆ. ಮೇ 16 ರಿಂದಲೇ ಶಾಲೆಗಳು ಪ್ರಾರಂಭ ಆಗಲಿದ್ದು, ಮುಖ್ಯಮಂತ್ರಿಗಳು ತುಮಕೂರಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಇದೇ ಮೇ 16 ಕ್ಕೆ ಉದ್ಘಾಟನೆ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.