ಹಾವೇರಿ: ಸಹಜವಾಗಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದಾಗ ಶಿಕಾರಿಪುರದ ಜನರನ್ನು ನೆನಪಿಸಿಕೊಂಡು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ, ಹೊರತು ಸಿಎಂ ಸ್ಥಾನಕ್ಕೆ ಕಣ್ಣೀರು ಹಾಕಿಲ್ಲ. ವಿರೋಧ ಪಕ್ಷದವರು ಯಡಿಯೂರಪ್ಪ ಅವರ ಬಗ್ಗೆ ಬಹಳ ಪ್ರೀತಿ ತೋರಿಸುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಲಗುಡ್ಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದು ಭಾವನಾತ್ಮಕವಾಗಿ, ಅದನ್ನು ಯಡಿಯೂರಪ್ಪ ಅವರೇ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷದವರು ಬರಿ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಮೂರು ಬಾರಿ ಸಂಸದನನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ಉಪಾಧ್ಯಕ್ಷ ಆಗಿದ್ದಾರೆ. ನಮ್ಮನ್ನೆಲ್ಲಾ ಬೆಳೆಸುವ ಕೆಲಸವನ್ನು ಪಕ್ಷ ಮಾಡಿದೆ. ಪಕ್ಷ ನಮ್ಮನ್ನ ಚಿವುಟ ಕೆಲಸ ಮಾಡಿಲ್ಲ ಎಂದರು. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ
ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಅಷ್ಟೆ ಸತ್ಯ. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹಾನಗಲ್ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಗೆಲುವು ಪಡೆಯುತ್ತಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು. ಪ್ರಧಾನಿ ಮೋದಿಯವರು ಕೊಟ್ಟ ಕಾರ್ಯಕ್ರಮಗಳು ಜನರ ಮನೆ ಮನೆಗೆ ಮುಟ್ಟಿವೆ. ಉದಾಸಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಅನುಕೂಲವಾಗಿದೆ ಎಂದರು. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ
ಇದೇ ವೇಳೆ, ದಿವಂಗತ ಉದಾಸಿಯವರು ಸಚಿವ ಸ್ಥಾನ ಸಿಗದೇ ಕೊರಗಿ, ಕೊರಗಿ ಸತ್ತರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ.ಉದಾಸಿ ಅವರ ಆರೋಗ್ಯ ಸರಿ ಇರಲಿಲ್ಲ. ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕೆಲಸ ಕೊಡಬಾರದು. ಅವರು ಆರೋಗ್ಯವಾಗಿರಲಿ ಅಂತ ಮಂತ್ರಿ ಸ್ಥಾನ ನೀಡಿರಲಿಲ್ಲ. ಪಕ್ಷ ಮತ್ತು ಯಡಿಯೂರಪ್ಪನವರು ಆ ತೀರ್ಮಾನ ಕೈಗೊಂಡಿದ್ದರು. ಯಡಿಯೂರಪ್ಪ ಕಷ್ಟಕಾಲದಲ್ಲಿದ್ದಾಗ ಉದಾಸಿ ಅವರು ಜೊತೆಗಿದ್ದರು. ದಿವಂಗತ ಉದಾಸಿ ಮತ್ತು ಯಡಿಯೂರಪ್ಪ ನಡುವೆ ಉತ್ತಮ ಸಂಬಂಧ ಇತ್ತು. ವಿರೋಧ ಪಕ್ಷದವರಿಗೆ ಹೇಳಿಕೊಳ್ಳೋಕೆ ಏನೂ ಇಲ್ಲ. ಅವರೇನೂ ಕೆಲಸ ಮಾಡಿಲ್ಲ. ಇಂತಹವುಗಳನ್ನು ಹೇಳಿ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆ ಮುಗಿಯುವವರೆಗೆ ಕ್ಷೇತ್ರದಲ್ಲಿದ್ದು ಪ್ರಚಾರ ನಡೆಸುವೆ. ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಿಕಟಪೂರ್ವ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ