– 75 ವರ್ಷಗಳ ಶಿಕ್ಷಣ ಸ್ವಾರ್ಥದ ಬದುಕು ಕಲಿಸಿಕೊಟ್ಟಿದೆ
ಬೆಂಗಳೂರು: ಭಾರತದಲ್ಲಿ ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಕುರಿತು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ಬಿ.ಸಿ ನಾಗೇಶ್ ಚಾಲನೆ ನೀಡಿ, ನಂತರ ಈ ಕುರಿತು ಮಾತನಾಡಿದ್ದು, ಅನೇಕ ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಬೇಕು ಎಂಬ ಚರ್ಚೆ ಆಗಿತ್ತು. 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಸತ್ ಅಂಗೀಕಾರ ಮಾಡಿತು. ಈ ಹಿಂದೆ ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು. ಬ್ರಿಟಿಷರು ಯಾವಾಗ ನಮ್ಮ ವ್ಯವಸ್ಥೆಗೆ ಕೈ ಹಾಕಿಲು ಮುಂದಾದ್ರೋ ಆಗ ಸ್ವಾತಂತ್ರ್ಯ ಹೋರಾಟ ಕಾವು ಹೆಚ್ಚಾಯ್ತು ಎಂದು ತಿಳಿಸಿದರು.
ಶ್ಯಾಂ ಪ್ರಸಾದ್ ಮುಖರ್ಜಿ ಅವರು ಶಿಕ್ಷಣ ವ್ಯವಸ್ಥೆ ಬಗ್ಗೆ ಅಂದೇ ಧ್ವನಿ ಎತ್ತಿದ್ದರು. ಪಂಚಶೀಲ ಶಿಕ್ಷಣ ನೀತಿ ಬರಬೇಕು ಎಂದು ಮುಖರ್ಜಿ ಅವರು ಪ್ರತಿಪಾದನೆ ಮಾಡ್ತಾರೆ. ಅವರು ಅಂದೇ ಮೆಕ್ಯಾಲೆ ಶಿಕ್ಷಣ ವ್ಯವಸ್ಥೆಯನ್ನ ವಿರೋಧ ಮಾಡಿದ್ರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಟೇಕ್ ಆಫ್ ಆಗ್ತಿದ್ದಂತೇ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಈಗ ಇರುವ ಶಿಕ್ಷಣ ಪದ್ದತಿ ಕುಟುಂಬಗಳನ್ನು ವಿಭಾಗ ಮಾಡುವ ವ್ಯವಸ್ಥೆಯನ್ನ ಹುಟ್ಟು ಹಾಕುತ್ತಿದೆ. ಇಂತಹ ವ್ಯವಸ್ಥೆಯ ಶಿಕ್ಷಣ ಬದಲಾವಣೆ ಆಗಬೇಕು. 75 ವರ್ಷಗಳ ಶಿಕ್ಷಣ ಸ್ವಾರ್ಥದ ಬದುಕು ಕಲಿಸಿಕೊಟ್ಟಿದೆ. ಶಿಕ್ಷಣ ವ್ಯವಸ್ಥೆ ಮೂಲಕ ದೇಶ ಬದಲಾವಣೆ ಮಾಡಬೇಕು. ಹೊಸ ಶಿಕ್ಷಣ ನೀತಿ 2014 ರಿಂದ ಚರ್ಚೆ ಆಗಿತ್ತು. 2020ರಲ್ಲಿ ಅನುಷ್ಠಾನ ಮಾಡಲಾಗಿದೆ. ಕರ್ನಾಟಕ ಮೊದಲ ರಾಜ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿದ್ದೇವೆ ಎಂದು ತಿಳಿಸಿದರು.
ಮುಂದಿನ ವರ್ಷದಿಂದ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಯಾವ ತರಗತಿಯಿಂದ ಹೇಗೆ ಅನುಷ್ಠಾನ ಮಾಡಬೇಕು ಎಂದು ಟಾಸ್ಕ್ ಫೋರ್ಸ್ ವರದಿ ಕೊಡುತ್ತೆ. ವರದಿ ಬಂದ ಬಳಿಕ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡುತ್ತೇವೆ. ಅದು ಬಿಟ್ಟು ವಿರೋಧಗಳಿಗೆ ನಾವು ತಲೆ ಕೆಡಿಸಿಕೊಳ್ಳೊಲ್ಲ ಎಂದು ಸ್ಪಷ್ಟನೆ ನೀಡಿದರು.
ಕೊರೊನಾ ಲಸಿಕೆಯನ್ನು ವಿರೋಧಿ ಮಾಡಿರೋ ಜನರು ನಮ್ಮ ಮಧ್ಯೆ ಇದ್ದಾರೆ. ಹೀಗಾಗಿ ಯಾವುದೇ ವಿರೋಧಕ್ಕೆ ನಾವು ತಲೆ ಕೆಡಿಸಿಕೊಳ್ಳೊಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಓದಿದವರು ಯಾರು ವಿರೋಧ ಮಾಡ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದದೇ ಅನೇಕ ಜನರು ವಿರೋಧ ಮಾಡ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ವಿರೋಧಗಳಿಗೆ ತಲೆ ಕೆಡಿಸಿಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡ್ತೀವಿ ಎಂದು ನಿಖರವಾಗಿ ತಿಳಿಸಿದರು. ಇದನ್ನೂ ಓದಿ: ಮೃಗಾಲಯದ 4 ಸಿಂಹಗಳಿಗೆ ಕೊರೊನಾ ಪಾಸಿಟಿವ್
ಈ ಸಮ್ಮೇಳನವನ್ನು ಆರ್.ವಿ. ಶಿಕ್ಷಕರ ಮಹಾ ವಿದ್ಯಾಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಸೇರಿ ಇಲಾಖೆ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದರು.