ಲಕ್ನೋ: ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಅಬಕಾರಿ ಖಾತೆ ಸಚಿವ ನಿತಿನ್ ಅಗರವಾಲ್ ತಿಳಿಸಿದರು.
1968ರ ಅಬಕಾರಿ ಅಂಗಡಿಗಳ ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಸ್ಥಿತಿಗತಿ ಕುರಿತು ಮಾಹಿತಿ ಕೋರಿದ ಬಹುಜನ ಸಮಾಜ ಪಕ್ಷದ ಸದಸ್ಯ ಭೀಮರಾವ್ ಅಂಬೇಡ್ಕರ್ ಅವರ ಪ್ರಶ್ನೆಗೆ ಅಗರವಾಲ್ ಪ್ರತಿಕ್ರಿಯಿಸಿದರು. ಈ ವೇಳೆ ಅವರು ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿ ಇರುವ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಇಂದು ಯೋಗಿ ಶಂಕುಸ್ಥಾಪನೆ
ಮಂದಿರ ಹೇಗಿರುತ್ತೆ?
ಅಯೋಧ್ಯೆ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕ ಶರದ್ ಶರ್ಮಾ ಅವರು ವಿವರಿಸಿದ್ದು, ರಾಮ ಮಂದಿರದ ಗರ್ಭಗೃಹವನ್ನು ಕೆಂಪು ಕಲ್ಲುಗಳಿಂದ ಸಿದ್ಧಪಡಿಸಲಾಗುವುದು. ಅದು ತುಂಬಾ ಮಂಗಳಕರವಾಗಿರುತ್ತದೆ. ದೇವಾಲಯದ ಗರ್ಭಗುಡಿಯು 2024ರ ಜನವರಿಯ ಮಕರ ಸಂಕ್ರಾಂತಿಯ ಒಳಗಡೆ ಸಿದ್ಧವಾಗಲಿದೆ. ಅಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ಜನರು ಪ್ರಾರ್ಥನೆ ವಿಶೇಷ ಸ್ಥಳವನ್ನು ನಿಗದಿಪಡಿಸಲಾಗುತ್ತೆ ಎಂದು ಹೇಳಿದ್ದಾರೆ.
ಸೂರ್ಯನ ಕಿರಣಗಳು ರಾಮನ ವಿಗ್ರಹದ ಮೇಲೆ ಬೀಳುವ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಗರ್ಭಗುಡಿಯನ್ನು ಕೆಂಪು ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ಇದು ಜನರಿಗೆ ಶಾಂತಿಯನ್ನು ನೀಡುತ್ತದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.
2020ರ ಆಗಸ್ಟ್ 5 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಅಂದಿನಿಂದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಮಮಂದಿರದ ಗರ್ಭಗುಡಿಗೆ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ: ಬೊಮ್ಮಾಯಿ
ಕೋರ್ಟ್ ತೀರ್ಪು
ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು 2019ರ ನವೆಂಬರ್ 9 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಭೂಮಿ ರಾಮನಿಗೆ ಸೇರಿದ್ದು ಎಂದು ಸರ್ವಾನುಮತದಿಂದ ತೀರ್ಪು ನೀಡಿತ್ತು.