ಬಿಗ್ ಬಾಸ್ ಕನ್ನಡ ಓಟಿಟಿ ಫಿನಾಲೆ ಹಂತ ತಲುಪಿದೆ. ಇದೇ ವಾರ ಕೊನೆಯ ಆಟ ಆಗಿರುವುದರಿಂದ ಬಿಗ್ ಬಾಸ್ ಸೀಸನ್ 9ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ವಾಹಿನಿಯು ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿದೆ. ಮೂಲಗಳ ಪ್ರಕಾರ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರುವ ಅನಿರುದ್ಧ (Aniruddha) ಅವರು ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ.
ಬಿಗ್ ಬಾಸ್ (Bigg Boss Kannada) ಮತ್ತೆ ಶುರುವಾಗಲಿದೆ ಎಂದು ಸುದ್ದಿ ಹರಡಿದಾಗಲೇ ‘ಜೊತೆ ಜೊತೆಯಲಿ’ ಸೀರಿಯಲ್ ಸೆಟ್ ನಲ್ಲಿ ಈ ಬಾರಿ ಅನಿರುದ್ಧ ಬಿಗ್ ಬಾಸ್ ಮನೆಗೆ ಹೋಗುತ್ತಾರಂತೆ. ಅದಕ್ಕಾಗಿ ಅವರು ಧಾರಾವಾಹಿ ಬಿಡಲಿದ್ದಾರೆ ಅಥವಾ ಬೇಗ ಧಾರಾವಾಹಿಯನ್ನು ಮುಗಿಸಲು ತಿಳಿಸಿದ್ದಾರೆ ಅಂತೆಲ್ಲ ಮಾತುಗಳು ಕೇಳಿ ಬಂದಿದ್ದು ನಿಜ. ವಾಹಿನಿಯೂ ಕೂಡ ಅನಿರುದ್ಧ ಅವರನ್ನು ಆಹ್ವಾನಿಸಿದ್ದು ಸುಳ್ಳಲ್ಲ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಅನಿರುದ್ಧ ಇರಲಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್ಗೆ ಟೆನ್ಷನ್ ಶುರು
ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬೇಡಿ ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಜೊತೆ ಜೊತೆಯಲಿ ಟೀಮ್ ಜೊತೆ ಕಿರಿಕ್ ಮಾಡಿಕೊಂಡ ಸಂದರ್ಭದಲ್ಲಿಇಂಥದ್ದೊಂದು ನಿರ್ಧಾರವನ್ನು ನಿರ್ಮಾಪಕರು ತಗೆದುಕೊಂಡಿದ್ದಾರೆ. ಆದರೆ, ವಾಹಿನಿಗಳು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತವೆ ಎನ್ನುವುದೇ ಈಗಿರುವ ಪ್ರಶ್ನೆ.
ಬಿಗ್ ಬಾಸ್ ಸೀಸನ್ 9ಕ್ಕೆ (Bigg Boss Season 9) ಹೋಗಲು ಅನಿರುದ್ಧ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ವಾಹಿನಿಯಾಗಲಿ ಅಥವಾ ಅನಿರುದ್ಧ ಆಗಲಿ ಖಚಿತ ಪಡಿಸಿಲ್ಲ. ಆದರೂ, ಕೂಡ ಇಂಥದ್ದೊಂದು ಸುದ್ದಿಯು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ (Aryavardhan) ಪಾತ್ರಕ್ಕೆ ಬೇರೆ ಶೇಪು ಕೊಟ್ಟಿರುವುದರಿಂದ ಅನಿರುದ್ಧ ಅವರು ಮತ್ತೆ ಆ ಧಾರಾವಾಹಿಯಲ್ಲಿ ನಟಿಸುವ ಆಸೆಯನ್ನು ಕೈ ಬಿಟ್ಟಿದ್ದಾರೆ. ಬಂದಿರುವ ಬಿಗ್ ಬಾಸ್ ಅವಕಾಶವನ್ನು ಒಪ್ಪಿಕೊಂಡಿದ್ದಾರಂತೆ.