ಶಿವಮೊಗ್ಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಯ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಈಗಾಗಲೇ ಒಂದು ತಿಂಗಳ ಹಿಂದೆ ಪೊಲೀಸ್ ರೇಡ್ ಸಹ ಆಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಚಟುವಟಿಕೆಯ ಬಗ್ಗೆ ತನಿಖೆ ನಡೆಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದೆಯೂ ಕೂಡಾ ಆರೋಪಿಗಳಿಗೆ ಗಾಂಜಾ ಸೇರಿದಂತೆ ಬೇರೆ ಬೇರೆ ಸೌಲಭ್ಯ ನೀಡುವುದನ್ನು ನಿರ್ಬಂಧ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ನಾಳೆ ಬೆಂಗಳೂರಿಗೆ ಹೋದ ನಂತರ ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಉಸ್ತುವಾರಿ ಬದಲಾವಣೆ ಅಸಮಾಧಾನವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆಗೆ ಯಾವುದೇ ಅಸಮಾಧಾನ ಇಲ್ಲ. ನಾವು ಕೆಲಸ ಮಾಡುವವರು. ಚಿಕ್ಕಮಗಳೂರು ಕೊಟ್ಟರೆ ಏನು, ತುಮಕೂರು ಕೊಟ್ಟರೆ ಏನು. ಅಲ್ಲಿಗೂ ಹೋಗಿ ಕೆಲಸ ಮಾಡುತ್ತೇನೆ. ಈಗಾಗಲೇ ಒಂದು ಜಿಲ್ಲೆ ನೋಡಿದ್ದೆ. ಈಗ ಇನ್ನೊಂದು ಜಿಲ್ಲೆ ಒಳಗೆ ಹೋಗಿ ನೋಡುವಂತಹದ್ದು, ರಿವ್ಯೂ ಮಾಡೋದು ಸಂತೋಷ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚಿಂತೆ ಇಲ್ಲ. ಅದನ್ನೆಲ್ಲಾ ಮುಖ್ಯಮಂತ್ರಿ ಗಮನಿಸಿಕೊಳ್ಳುತ್ತಾರೆ ಎಂದ ಅವರು, ಹಿರಿಯ ಶಾಸಕರ ಸಭೆ ವಿಚಾರವಾಗಿ ಮಾತನಾಡಿ, ಸಭೆ ನಡೆದಿದೆಯೋ, ಇಲ್ಲವೋ ಗೊತ್ತಿಲ್ಲ. ಅನೇಕ ಬಾರಿ ನಾವು ಸಹ ಎಲ್ಲರೂ ಸೇರಿಕೊಳ್ಳುತ್ತಿರುತ್ತೇವೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಎಲ್ಲರೂ ಒಳ್ಳೆಯವರು, ಪಕ್ಷ ಕಟ್ಟಿದವರು ಇದ್ದಾರೆ. ಯಾರೂ ಸಹ ಎಂದಿಗೂ ಪಕ್ಷಕ್ಕೆ ಹಾನಿ ಮಾಡುವ ಕೆಲಸ ಮಾಡುವುದಿಲ್ಲ. ನಮ್ಮಲ್ಲಿ ವಲಸೆ, ಮೂಲ ಬಿಜೆಪಿ ಎನ್ನುವುದು ಇಲ್ಲ. ಎಲ್ಲರೂ ಈಗಾಗಲೇ ನಮ್ಮ ಜೊತೆ ಸೇರಿ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ