ಬಿಜೆಪಿ ಸೋಲಿನ ಭೀತಿಯಿಂದ ಚುನಾವಣೆ ಮುಂದೂಡುತ್ತಿದೆ: ಪೃಥ್ವಿ ರೆಡ್ಡಿ

Public TV
1 Min Read

ಬೆಂಗಳೂರು: ಕೋವಿಡ್ ನಿಯಂತ್ರಣ, ರೈತರ ಸಮಸ್ಯೆ, ಆರ್ಥಿಕತೆ, ಉದ್ಯೋಗ ಸೃಷ್ಟಿ, ರಸ್ತೆ ದುರಸ್ತಿ ಮುಂತಾದ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದಲೇ ಬಿಬಿಎಂಪಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಪದೇ ಪದೇ ಮುಂದೂಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಟ್ಟಿಟ್ಟರ್ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?

ಬಿಬಿಎಂಪಿಯ ವಾರ್ಡ್‍ಗಳ ಮರುವಿಂಗಡಣೆ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ 13 ತಿಂಗಳಿನಿಂದ ಜನಪ್ರತಿನಿಧಿಗಳ ಬದಲು ಅಧಿಕಾರಿಗಳು ಮಹಾನಗರ ಪಾಲಿಕೆಯನ್ನು ಮನಸೋ ಇಚ್ಛೆ ಮುನ್ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಚುನಾವಣೆ ಮುಂದೂಡಲು ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಬಿಜೆಪಿ ಹಾಳು ಮಾಡುತ್ತಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಇನ್ನಷ್ಟು ತಿಂಗಳು ಮುಂದೂಡುವ ಉದ್ದೇಶದಿಂದಲೇ ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ ಪ್ರತ್ಯೇಕ ಆಯೋಗ ರಚಿಸಿದೆ. ಇದನ್ನೂ ಓದಿ: ಹೃದಯಾಘಾತದಿಂದ ಇನ್ಸ್‌ಪೆಕ್ಟರ್‌ ನಿಧನ

ಕೋವಿಡ್ ಸಂದರ್ಭದಲ್ಲಿ ಬೆಡ್, ಆಕ್ಸಿಜನ್ ಸೌಲಭ್ಯ ಕಲ್ಪಿಸಲು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ತೋರಿತು. ಪೆಟ್ರೋಲ್, ಡಿಸೇಲ್, ಎಲ್‍ಪಿಜಿ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಉದ್ಯೋಗ ಸೃಷ್ಟಿಯಲ್ಲೂ ಸರ್ಕಾರ ವಿಫಲವಾಗಿದ್ದು, ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗಿದೆ. ದೇಶದ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಿಗೆ ಹೊಸದಾಗಿ ಡಾಂಬರು ಹಾಕುವುದು ಹಾಗಿರಲಿ, ಗುಂಡಿಗಳಿಗೆ ವೈಜ್ಞಾನಿಕ ವಿಧಾನದಲ್ಲಿ ತೇಪೆ ಹಾಕಲೂ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಣ್ಣ ಮಳೆಗೂ ತೇಪೆ ಕಿತ್ತುಹೋಗುತ್ತಿದೆ. ಹೀಗೆ ಎಲ್ಲದರಲ್ಲೂ ವಿಫಲವಾಗಿರುವ ಬಿಜೆಪಿಗೆ ಸೋಲಿನ ಭೀತಿಯಿದೆ. ಆದ್ದರಿಂದ ಏನಾದರೊಂದು ಕಾರಣ ಹುಡುಕಿಕೊಂಡು ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಎಸ್‍ಪಿ ವರ್ಗಾವಣೆ ವಾರ್ – ರಾಜಕೀಯ ಪ್ರಭಾವಿಗಳ ಒತ್ತಡ ಆರೋಪ

Share This Article
Leave a Comment

Leave a Reply

Your email address will not be published. Required fields are marked *