ಜಾರ್ಖಂಡ್‌ನಲ್ಲಿ ಎನ್‍ಕೌಂಟರ್ – ಹೊಂಚು ಹಾಕಿ ಕುಳಿತಿದ್ದ ನಾಲ್ವರು ನಕ್ಸಲರ ಹತ್ಯೆ

Public TV
1 Min Read

ರಾಂಚಿ: ಜಾರ್ಖಂಡ್‌ನ (Jharkhand) ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ನಡೆಸಿದ ಎನ್‍ಕೌಂಟರ್‌ಲ್ಲಿ (Encounter) ಹೊಂಚು ಹಾಕಿ ದಾಳಿ ನಡೆಸಲು ತಯಾರಾಗಿದ್ದ ನಾಲ್ವರು ಮಾವೋವಾದಿಗಳು ಸಾವಿಗೀಡಾಗಿದ್ದಾರೆ. ಹತ್ಯೆಗೀಡಾದವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ತೋಂಟೊ ಮತ್ತು ಗೋಯಿಲ್ಕೆರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ವೇಳೆ ಎನ್‍ಕೌಂಟರ್ ನಡೆದಿದೆ. ಈ ವೇಳೆ ಅಡಗಿ ಕುಳಿತಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ. ಎನ್‍ಕೌಂಟರ್ ಬಳಿಕ ಇಬ್ಬರು ನಕ್ಸಲರನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಾರ್ಖಂಡ್‌ನ ಪೊಲೀಸ್ ಐಜಿ (ಕಾರ್ಯಾಚರಣೆ) ಅಮೋಲ್ ವಿ ಹೋಮ್ಕರ್ ಅವರು, ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಲ್ವರು ಎನ್‍ಕೌಂಟರ್ ವೇಳೆ ಬಲಿಯಾಗಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭದ್ರತಾ ಪಡೆಯ ಗುಂಡಿಗೆ ಬಲಿಯಾದವರು ಝೋನಲ್ ಕಮಾಂಡರ್, ಸಬ್ ಜನರಲ್ ಕಮಾಂಡರ್, ಏರಿಯಾ ಕಮಾಂಡರ್ ಮತ್ತು ಇನ್ನೊಬ್ಬರು ಮಹಿಳಾ ಸದಸ್ಯರಾಗಿದ್ದಾರೆ. ಎನ್‍ಕೌಂಟರ್ ನಂತರ, ಭದ್ರತಾ ಪಡೆಗಳು ಇಬ್ಬರು ನಕ್ಸಲರನ್ನು ಬಂಧಿಸಿದ್ದು, ಬಂಧಿತರು ಎನ್‍ಕೌಂಟರ್ ನಡೆದ ಪ್ರದೇಶದ ಕಮಾಂಡರ್ ಮತ್ತು ಮತ್ತೋರ್ವರು ತೀವ್ರಗಾಮಿ ಮಹಿಳಾ ನಕ್ಸಲೈಟ್ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 13 ರಂದು ಪಶ್ಚಿಮ ಸಿಂಗ್‍ಭೂಮ್ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡ ನಂತರ ನಡೆದ ಎರಡನೇ ಎನ್‍ಕೌಂಟರ್ ಇದಾಗಿದೆ. ಮೇ 23 ರಂದು ನಡೆದ ಎನ್‍ಕೌಂಟರ್‌ನಲ್ಲಿ ನಕ್ಸಲ್ ಕಮಾಂಡರ್ ಆಗಿದ್ದ ಬುಧ್ರಾಮ್ ಮುಂಡಾ ಹತ್ಯೆಗೀಡಾಗಿದ್ದ. ಇದನ್ನೂ ಓದಿ: ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೊಬೈಲ್‌ ಹುಡುಕಾಟ

Share This Article