ಕಡೂರು ಕ್ಷೇತ್ರದಿಂದ ವೈಎಸ್‌ವಿ ದತ್ತ ಸ್ಪರ್ಧೆ: ರೇವಣ್ಣ ಘೋಷಣೆ

Public TV
1 Min Read

– ವೈಎಸ್‌ವಿ ದತ್ತ ಘರ್‌ ವಾಪ್ಸಿ
– ಜೆಡಿಎಸ್ ಅಧಿಕೃತ ಅಭ್ಯರ್ಥಿ ಧನಂಜಯ್‌ಗೆ ಕೊಕ್!

ಚಿಕ್ಕಮಗಳೂರು: ಮಾಜಿ ಶಾಸಕ ವೈ.ಎಸ್.ವಿ ದತ್ತ (YSV Datta) ಅವರು ಮರಳಿ ಜೆಡಿಎಸ್‌ಗೆ (JDS) ಬಂದಿದ್ದಾರೆ. ಕಡೂರಿನಲ್ಲಿ (Kaduru) ಜೆಡಿಎಸ್ ಅಭ್ಯರ್ಥಿಯಾಗಿ ದತ್ತ ಸ್ಪರ್ಧೆ ಮಾಡಲಿದ್ದಾರೆ.

ವೈ.ಎಸ್.ವಿ ದತ್ತ ಮನೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna), ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಇಂದು ಭೇಟಿ ನೀಡಿದರು. ಕಡೂರು ತಾಲೂಕಿನ ಯಗಟಿಯಲ್ಲಿರುವ ದತ್ತ ಅವರ ನಿವಾಸಕ್ಕೆ ತೆರಳಿ ಚರ್ಚಿಸಿದರು. ಕಡೂರಿನಲ್ಲಿ ದತ್ತ ಸ್ಪರ್ಧಿಸಲಿದ್ದಾರೆ ಎಂದು ಈ ವೇಳೆ ರೇವಣ್ಣ ಘೋಷಿಸಿದ್ದಾರೆ. ಇದನ್ನೂ ಓದಿ: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ: ಸಿ.ಟಿ ರವಿ

ದತ್ತ ಅವರು ಇದೇ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಆಗ ಎಷ್ಟೇ ಕಷ್ಟ ಆದರೂ ಸರಿ ನಾನು ಬಂದೇ ಬರುತ್ತೇನೆ ಎಂದು ಹೆಚ್‌.ಡಿ.ದೇವೇಗೌಡರು ತಿಳಿಸಿದ್ದಾರೆ ಎಂದು ರೇವಣ್ಣ ಹೇಳಿದ್ದಾರೆ.

ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ದತ್ತ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಹೀಗಾಗಿ ಬೇಸರಗೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್‌ನಲ್ಲೂ ಅವರಿಗೆ ಟಿಕೆಟ್ ಸಿಗಲಿಲ್ಲ. ಈ ವೇಳೆ ಬೇಸರ ವ್ಯಕ್ತಪಡಿಸಿದ ದತ್ತ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಮರಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲೇ ಸೋಮಣ್ಣ ಕಟ್ಟಿ ಹಾಕಲು ʼಕೈʼ ರಣವ್ಯೂಹ! – ಬಿಜೆಪಿ ಬಂಡಾಯವನ್ನೇ ಬಂಡವಾಳ ಮಾಡಿಕೊಳ್ಳಲು‌ ಪ್ಲಾನ್

ಬುಧವಾರ ದೇವೇಗೌಡರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇಂದು ದತ್ತ ಮನೆಗೆ ರೇವಣ್ಣ, ಪ್ರಜ್ವಲ್ ಭೇಟಿ ನೀಡಿದ್ದರು. ಈ ವೇಳೆ ದತ್ತ ಅವರ ಸ್ಪರ್ಧೆಯನ್ನು ಖಚಿತಪಡಿಸಿದರು.

ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಧನಂಜಯ್ ಅವರನ್ನು ಅಧಿಕೃತಗೊಳಿಸಲಾಗಿತ್ತು. ಆದರೆ ಈಗ ಧನಂಜಯ್ ಅವರಿಗೆ ಕೊಕ್ ನೀಡಲಾಗಿದೆ. ದತ್ತ ಅವರಿಗೆ ಟಿಕೆಟ್ ಎಂದು ಘೋಷಿಸಿದ್ದಾರೆ.

Share This Article