ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೈಎಸ್ ಜಗನ್ ಚಿಕ್ಕಪ್ಪ ಬರ್ಬರ ಹತ್ಯೆ

Public TV
2 Min Read

ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಸಿಎಂ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಕಿರಿಯ ಸಹೋದರ ವೈ.ಎಸ್.ವಿವೇಕಾನಂದ ರೆಡ್ಡಿ (68) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ವೈಎಸ್‍ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಪುಲಿವೆಂಡುಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಲಭ್ಯವಾಗಿರುವ ವಿಧಿವಿಜ್ಞಾನ ಪರೀಕ್ಷೆಯ ಫಲಿತಾಂಶದಲ್ಲಿ ವೈ.ಎಸ್.ವಿವೇಕಾನಂದ ಅವರನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿದೆ.

ವೈ.ಎಸ್.ವಿವೇಕಾನಂದ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೊಲೆಯಾದ ಮನೆಯ ಬೆಡ್‍ರೂಮ್ ಹಾಗೂ ಸ್ನಾನದ ಕೋಣೆಯಲ್ಲಿ ರಕ್ತ ಬಿದ್ದಿದ್ದು, ಕೊಲೆ ಶಂಕೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಮೃತ ದೇಹದ ತಲೆಯ ಮೇಲೆ 2 ಹಾಗೂ ದೇಹದ ಮೇಲೆ 7 ಗಾಯಗಳಾಗಿದ್ದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ.

ಆಗಿದ್ದೇನು?:
ವೈ.ಎಸ್.ವಿವೇಕಾನಂದ ರೆಡ್ಡಿ ಅವರ ಪತ್ನಿ ಅಮೆರಿಕದಲ್ಲಿರುವ ಮಗಳು ಹಾಗೂ ಅಳಿಯನ ಜೊತೆಗೆ ಇದ್ದಾರೆ. ಹೀಗಾಗಿ ವಿವೇಕಾನಂದ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ವೈ.ಎಸ್.ವಿವೇಕಾನಂದ ಅವರು ವೈಎಸ್‍ಆರ್ ಅಭ್ಯರ್ಥಿ ಎಸ್.ರಘುರಾಮಿ ರೆಡ್ಡಿ ಪರವಾಗಿ ಪ್ರಚಾರ ಮಾಡಲು ಮೈದುಕೂರು ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ತೆರಳಿದ್ದರು. ಪ್ರಚಾರ ಮುಗಿಸಿಕೊಂಡು ಬಂದು ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ದೃಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ವಿವೇಕಾನಂದ ರೆಡ್ಡಿ ಅವರ ಸೋದರಳಿಯ ಹಾಗೂ ಮಾಜಿ ಶಾಸಕ ಐ.ಎಸ್.ಅವಿನಾಶ್ ರೆಡ್ಡಿ ಮಾತನಾಡಿ, ಇದು ಅನುಮಾನಾಸ್ಪದ ಸಾವಾಗಿದೆ. ದೇಹದಲ್ಲಿ ಹರಿತವಾದ ಚಾಕುವಿನಿಂದ ಇರಿದಿರುವ ಗಾಯಗಳು ಕಂಡು ಬಂದಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

ವಿವೇಕಾನಂದ ರೆಡ್ಡಿ ಅವರ ಮೃತ ದೇಹದಲ್ಲಿ 7 ಇರಿದ ಗಾಯಗಳು ಹಾಗೂ ತಲೆಯಲ್ಲಿ 2 ಗಾಯಗಳು ಪತ್ತೆಯಾಗಿವೆ. ಇದು ಸಹಜ ಸಾವಲ್ಲ ಹತ್ಯೆ ಎಂಬುದನ್ನು ಕಡಪ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇಶ್ ಶರ್ಮಾ ಖಚಿತಪಡಿಸಿದ್ದರು. ಕೊಲೆ ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರವು ಹಿರಿಯ ಪೊಲೀಸ್ ಅಧಿಕಾರಿ ಅನಿತ್ ಗಾರ್ಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *