ಗದಗ: ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಅನ್ಯಕೋಮಿನ ಯುವಕರು ಹಾಗೂ ದೇವಸ್ಥಾನದ ಪೂಜಾರಿ ನಡುವೆ ಕ್ಷುಲ್ಲಕ ವಿಷಯಕ್ಕೆ ಮಾತಿನ ಜಗಳವಾಗಿದೆ.
ಈ ವೇಳೆ ಅನ್ಯಕೋಮಿನ ಐದಾರು ಜನ ಯುವಕರು ಚಪ್ಪಲಿ ಧರಿಸಿಕೊಂಡು ಮಲ್ಲಿಕಾರ್ಜುನ ದೇವಸ್ಥಾನದೊಳಗೆ ನುಗ್ಗಿ ಪೂಜಾರಿ ಕರಿಬಸಪ್ಪನನ್ನು ಚಪ್ಪಲಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಪೂಜಾರಿಗೆ ಚಪ್ಪಲಿಯಿಂದ ಹೊಡೆದಿರುವುದರಿಂದ ಅಪಚಾರವಾಗಿದೆ. ಶಾಸ್ತ್ರೋಕ್ತವಾಗಿ ಸರಿಪಡಿಸುವುಂತೆ ಸ್ಥಳೀಯ ಹಿರಿಯರು ಹಲ್ಲೆ ಮಾಡಿದ ಯುವಕರಿಗೆ ಎರಡು ದಿನ ಗಡುವು ನೀಡಿದರೂ ಸರಿಪಡಿಸಿಲ್ಲ. ಆದ್ದರಿಂದ ಹಲ್ಲೆ ಮಾಡಿರುವ ಯುವಕರನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಊರಿನ ನೂರಾರು ಜನರು ರಾತ್ರೋರಾತ್ರಿ ಗದಗನ ಗ್ರಾಮೀಣ ಠಾಣೆಯ ಪೋಲಿಸರ ಮೊರೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಊರಿನಲ್ಲಿ ಜರುಗಬೇಕಿದ್ದ ಮಲ್ಲಿಕಾರ್ಜುನ ದೇವರ ಜಾತ್ರೆ ನಿಂತು ಹೋಗಿದೆ. ಜಾತ್ರೆಯಲ್ಲಿ ಕರಿಬಸಪ್ಪನಿಗೆ ದೇವರು ಮೈಯಲ್ಲಿ ಬಂದು ಮಳೆ, ಬೆಳೆಗಳ ವಾಡಿಕೆ ಬಗ್ಗೆ ಈ ವರ್ಷ ಹೇಳದಿರುವುದು ಸಾಕಷ್ಟು ಆತಂಕ ಮೂಡಿದೆ. ಈ ಘಟನೆ ನಡೆಸಿರೋದು ನಮ್ಮ ಊರಿಗೆ ಅಪಚಾರವಾಗಿದೆ. ಊರಿಗೆ ಅನಾಹುತ ಕಾದಂತಿದೆ ಎಂದು ಸ್ಥಳೀಯ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ನ್ಯಾಯ ಸಿಗದೆ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv