ವಿಜಯಪುರ: ತಮ್ಮ ಪಟ್ಟಣಕ್ಕೆ ಸರ್ಕಾರಿ ಪ್ರೌಢಶಾಲೆ ಬೇಕು ಎಂದು ತನ್ನದೇ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕನೊಬ್ಬ ಪತ್ರ ಬರೆದಿದ್ದಾನೆ.
ವಿಜಯರಂಜನ ಜೋಶಿ ತನ್ನ ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಯುವಕ. ಈತ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ನಿವಾಸಿಯಾಗಿದ್ದು, 10-15 ಸಾವಿರ ಜನಸಂಖ್ಯೆ ಇರುವ ನಾಲತವಾಡ ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜುಗಳು ಯಾವುದೂ ಇಲ್ಲ. ಆದ್ದರಿಂದ ಶಾಲೆ ನಿರ್ಮಿಸಬೇಕೆಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ.
ಜೋಶಿ ನಾಲತವಾಡದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ, ಶಿಕ್ಷಣ ಸಚಿವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈಗ ರಾಜ್ಯ ಸರ್ಕಾರ ಸತ್ತು ಶವವಾಗಿದೆ ಎಂದು ಪ್ರಧಾನಿಗೆ ಪತ್ರ ಬರೆಯುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ವರ್ಷಗಳಿಂದ ಸರ್ಕಾರಿ ಶಾಲಾ-ಕಾಲೇಜುಗಳ ಸಂಖ್ಯೆ ಕಡಿಮೆ ಇವೆ. ಹತ್ತಾರು ಹಳ್ಳಿಗಳಿಂದ ದೂರ ಹೋಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತರ ಕರ್ನಾಕಟಲ್ಲಿ ಬರಗಾಲ, ಬಡತನ ಇರುವುದರಿಂದ ಖಾಸಗಿ ಶಾಲೆಯಲ್ಲಿ ಕಲಿಸುವಷ್ಟು ಶ್ರೀಮಂತರಲ್ಲ ಇಲ್ಲಿನ ಜನರು. ಸರ್ಕಾರಿ ಶಾಲೆ ಇಲ್ಲದೆ, ಶಿಕ್ಷಣ ಸಿಗದ ಕಾರಣ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದೆ. ಇದರಿಂದ ನನಗೆ ತುಂಬ ನೋವಾಗಿದೆ, ನೀವಾದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ಮೇಲೆ ಪತ್ರ ಬರೆದಿದ್ದೇನೆ ಎಂದು ಯುವಕ ಪತ್ರದಲ್ಲಿ ತಿಳಿಸಿದ್ದಾನೆ.