ಬೆಂಗಳೂರು ಮಹಾ ಮಳೆಗೆ ಆಟೋ ಸಮೇತ ಕೊಚ್ಚಿ ಹೋದ ಯುವಕ

Public TV
1 Min Read

ಬೆಂಗಳೂರು: ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಪ್ರವಾಹ ಪರಿಸ್ಥಿತಿಯನ್ನು ಉಂಟು ಮಾಡಿದ್ದು, ಮಂಗಳವಾರ ರಾತ್ರಿ ಯುವಕನೊಬ್ಬ ಆಟೋ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.

ಮೃತ ಯುವಕ ನಗರದ ಬನಶಂಕರಿ ನಿವಾಸಿ ಸಂತೋಷ್(26) ಎಂದು ಗುರುತಿಸಲಾಗಿದ್ದು, ಸ್ನೇಹಿತರ ಜೊತೆ ಪಾರ್ಟಿಗೆ ಎಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಸಂತೋಷ್ ತನ್ನ ಸ್ನೇಹಿತರಾದ ವಿಜಯ್ ಕುಮಾರ್ ಹಾಗೂ ಇಬ್ಬರು ಅಪ್ರಾಪ್ತ ಹುಡುಗಿಯರೊಂದಿಗೆ ಕಗ್ಗಲಿಪುರ ಬೆಟ್ಟಕ್ಕೆ ಹೋಗಿದ್ದರು. ಬೆಟ್ಟದ ಪಕ್ಕದ ಹಳ್ಳದಲ್ಲಿ ಪಾರ್ಟಿ ಏರ್ಪಡಿಸಿದ್ದರು ಎಂದು ತಿಳಿದು ಬಂದಿದೆ. ನಂತರ ಕನಕಪುರ ರಸ್ತೆ ಗಣಕನದೊಡ್ಡಿ ಬಳಿ ಇವರಿಬ್ಬರು ಆಟೋವನ್ನು ತಿರುಗಿಸಿ ಕೊಂಡು ಬರುವುದಾಗಿ ಹೇಳಿ ಇಬ್ಬರು ಹುಡುಗಿಯರನ್ನು ಕೆಳಗಿಳಿಸಿದ್ದಾರೆ.

ಮಳೆಯ ಪ್ರಮಾಣ ಅಧಿಕವಾದ್ದರಿಂದ ಆಟೋ ನೀರಿನಲ್ಲಿ ಆಫ್ ಆಗಿದ್ದು, ವಿಜಯ್ ಆಟೋದಿಂದ ಕೆಳಗಿಳಿದು ತಳ್ಳಲು ಮುಂದಾಗಿದ್ದಾನೆ ಈ ಸಂದರ್ಭದಲ್ಲಿ ಆಟೋ ಸಮೇತ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆದರೆ ವಿಜಯ್ ಕುಮಾರ್ ಕಾಲುವೆಯಲ್ಲಿ ಸಿಕ್ಕ ಮರವನ್ನು ಹಿಡಿದುಕೊಂಡು ಬೆಳಗಿನ ತನಕ ಕಾಲ ಕಳೆದಿದ್ದು, ಸಂತೋಷ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬುಧವಾರ ಬೆಳಗ್ಗೆ ಇಬ್ಬರು ಹುಡುಗಿಯರು ಊರಿನವರಿಗೆ ಮಾಹಿತಿ ನೀಡಿದ್ದು, ಸಂತೋಷ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಸಂತೋಷ್‍ನ ಮೃತ ದೇಹ ಘಟನ ಸ್ಥಳದಿಂದ 5 ಕಿ.ಮೀ ದೂರದಲ್ಲಿ ದೊರೆತಿದೆ.

ಸಂತೋಷ್ ಮನೆಯಿಂದ ಹೊರಡುವಾಗ ಯಾರಿಗೂ ಹೇಳದೆ ಪ್ರವಾಸಕ್ಕೆ ಹೋಗಿದ್ದು, ಗುರುವಾರ ಮೃತ ದೇಹ ದೊರಕಿದೆ. ಆಟೋ ಇನ್ನೂ ಸಿಕ್ಕಿಲ್ಲ ಎಂದು ಮೃತ ಸಂತೋಷ್ ಸಹೋದರ ಪ್ರಶಾಂತ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *