ಪ್ರಧಾನಿ ಮೋದಿ, ಅಸ್ಸಾಂ ಸಚಿವರಿಗೆ ಜೀವ ಬೆದರಿಕೆಯ ಪೋಸ್ಟ್- ಯುವಕ ಬಂಧನ

Public TV
1 Min Read

ದಿಸ್ಪುರ್: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಸ್ಸಾಂ ಹಣಕಾಸು ಸಚಿವ ಡಾ.ಹಿಮಂತ ಬಿಸ್ವಾ ಶರ್ಮಾ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ನಲ್ಬಾರಿ ಜಿಲ್ಲೆಯ ಯುವಕನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕನನ್ನು ಅಸ್ಸಾಂನ ನಲ್ಬಾರಿ ಜಿಲ್ಲೆಯ ಬೋರ್ಭಾಗ್ ಪ್ರದೇಶದ ಲಿಂಟು ಕಿಶೋರ್ ಶರ್ಮಾ ಎಂದು ಗುರುತಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಕಿಶೋರ್ ತನ್ನ ಫೇಸ್‍ಬುಕ್ ಪೋಸ್ಟ್‍ನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರ ಸಾವು 2021ರಲ್ಲಿ ಚುನಾವಣಾ ಸಭೆಯ ವೇಳೆ ನಡೆಯಬಹುದು ಎಂದು ಬರೆದುಕೊಂಡಿದ್ದಾನೆ.

ಅದೇ ದಿನ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಾರ್ವಜನಿಕ ರ್ಯಾಲಿ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ಭಯೋತ್ಪಾದಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಗುರಿಯಾಗಿಸಿಕೊಂಡಿದ್ದಾರೆ. ಆದರೆ ಹಿಮಂತ ಬಿಸ್ವಾ ಶರ್ಮಾ ಸಾಯುತ್ತಾರೆ. ಹಿಮಂತ ಅವರ ಜೀವ ನನ್ನ ಕೈಯಲ್ಲಿದೆ. ಹಿಮಂತ ಬಿಸ್ವಾ ಶರ್ಮಾ ತಮ್ಮ ಜೀವ ಉಳಿಸಿಕೊಳ್ಳಲು ನಲ್ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನಗೆ ತಕ್ಷಣ ಕೆಲಸ ಕೊಡಿಸಬೇಕು ಎಂದು ಲಿಂಟು ಕಿಶೋರ್ ಶರ್ಮಾ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದ್ದಾನೆ.

ಲಿಂಟು ಕಿಶೋರ್ ಶರ್ಮಾ ಸೆಪ್ಟೆಂಬರ್ 15ರಂದು ಫೇಸ್‍ಬುಕ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾನೆ. ಈ ಕುರಿತು ಸಾಲ್ಜ್ ಉದ್ದೀನ್ ಎಂಬುವರು ನಲ್ಬಾರಿ ಪೊಲೀಸ್ ಠಾಣೆಯಲ್ಲಿ ಕಿಶೋರ್ ವಿರುದ್ಧ ಎಫ್‍ಐಆರ್ ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *