ಕರ್ಚೀಫ್ ತಗೊಳ್ಳೋಕೆ ಕಾಸಿಲ್ಲ ಎಂದ ಯುವಕ- ಪಿತ್ತ ನೆತ್ತಿಗೇರಿದ ಎಸ್‍ಐ ತೋರಿಸಿದ್ರು ಲಾಠಿ ರುಚಿ

Public TV
1 Min Read

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬೇಕಾಬಿಟ್ಟಿ ಬೈಕಿನಲ್ಲಿ ಸುತ್ತಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ತನ್ನ ಬೈಕಿನಲ್ಲಿ ಜಾಲಿ ರೈಡ್ ಮಾಡಿಕೊಂಡು ಕುಂದಾಪುರ ರಸ್ತೆಯಲ್ಲಿ ಸುತ್ತಾಡುತ್ತಿದ್ದನು. ಪೊಲೀಸರು ನಿಲ್ಲಿಸಿ ಬಸ್ಕಿ ಹೊಡೆಸಿದ್ದಾರೆ. ಈ ಸಂದರ್ಭದಲ್ಲಿ ಯುವಕ ವಿಶ್ವನಾಥ್ ಉಡಾಫೆ ಮಾತಾಡಿದ್ದಾನೆ.

ವಿಶ್ವನಾಥ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಾಸ್ಕ್ ಹಾಕು ಎಂದು ಹೇಳಿದ್ದಕ್ಕೆ ಮೆಡಿಕಲ್‍ನಲ್ಲಿ ಮಾಸ್ಕ್ ಇಲ್ಲ ಎಂದಿದ್ದಾನೆ. ಕರ್ಚೀಫ್ ಕಟ್ಟಿಕೋ ಎಂದಾಗ ಕರ್ಚೀಫ್ ಖರೀದಿಸುವುದಕ್ಕೆ ನನ್ನ ಬಳಿ ಹಣ ಇಲ್ಲ ಎಂದು ಉಡಾಫೆ ಮಾತಾಡಿದ್ದಾನೆ. ಅಲ್ಲದೆ ಡಿಸಿಗೆ ಕರೆ ಮಾಡುತ್ತೇನೆ ಎಂದು ವಾಗ್ವಾದಕ್ಕಿಳಿದಿದ್ದಾನೆ.

ಯುವಕನ ಆಟಾಟೋಪ ನೋಡಿ ರೋಸಿ ಹೋದ ಅಧಿಕಾರಿಗಳು ನಾಲ್ಕು ಬಿಗಿದಿದ್ದಾರೆ. ಎಸ್‍ಐ ಹರೀಶ್ ನಾಯ್ಕ್ ಜೊತೆ ಜಗಳವಾಡಿದಾಗ ಅವರ ಕೋಪ ನೆತ್ತಿಗೇರಿದೆ. ನಾವೇನು ಇಲ್ಲಿ ಕತ್ತೆ ಕಾಯೋದಕ್ಕೆ ನಿಂತಿದೀವಾ? ನಿಮ್ಮ ಆರೋಗ್ಯಕ್ಕೆ ಹಗಲು ರಾತ್ರಿ ಕೆಲಸ ಮಾಡ್ತಿದ್ರೆ ಉಡಾಫೆ ತೋರಿಸ್ತೀಯಾ ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಉಡಾಫೆ ಮತ್ತು ಕಾನೂನು ಉಲ್ಲಂಘಿಸಿದ್ದಕ್ಕೆ ಕರ್ತವ್ಯ ನಿರತ ಎಸ್‍ಐ ಜೊತೆ ವಾಗ್ವಾದ ಮಾಡಿದ ಯುವಕನ ಮೇಲೆ ಸೆಕ್ಷನ್ 269, 353 ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *