ಮದುವೆಯಾಗಲು ನಿರಾಕರಿಸಿ ಪ್ರೇಯಸಿಯ ಕೊಲೆ ಮಾಡಿ ಶವ ಹೂತಿಟ್ಟ ಪ್ರಿಯಕರ

Public TV
2 Min Read

– 4 ವರ್ಷದ ನಂತರ ಬಯಲಾಯ್ತು ಪ್ರಿಯತಮನ ನೀಚ ಕೃತ್ಯ

ಯಾದಗಿರಿ: ಮೂರು ವರ್ಷದಿಂದ ಪ್ರೀತಿ ಮಾಡಿ, ಮದುವೆ ಮಾಡಿಕೊಳ್ಳುತ್ತೆನೆಂದು ಪ್ರೇಯಸಿಯನ್ನು ನಂಬಿಸಿ ಗರ್ಭಿಣಿ ಮಾಡಿ ನಂತರ ಪ್ರಿಯತಮ ಮೋಸ ಮಾಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಮದುವೆ ಮಾಡಿಕೋ ಅಂದ್ರೆ ಪ್ರೇಯಸಿಯನ್ನೇ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ ಪ್ರಿಯತಮನ ನೀಚ ಕೃತ್ಯ ನಾಲ್ಕು ವರ್ಷದ ನಂತರ ಬೆಳಕಿಗೆ ಬಂದಿದ್ದು, ಅವನ ಎದರೇ ಪ್ರೇಯಸಿಯ ಮೃತದೇಹದ ಅವಶೇಷಗಳನ್ನು ಹೊರತೆಗೆಯಲಾಗಿದೆ.

ಜಿಲ್ಲೆಯ ಸುರಪುರ ತಾಲೂಕಿನ ಹಾಲಗೇರಾ ಗ್ರಾಮದ ನಿವಾಸಿ ಭೀಮನಗೌಡ ಎಂಬಾತನೇ ಪ್ರೇಯಸಿಯನ್ನು ಕೊಲೆಗೈದ ವ್ಯಕ್ತಿ. ಭೀಮನಗೌಡ ಅದೇ ಗ್ರಾಮದ ಕುಸುಮಾ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಕುಸಮಾರ ತಾಯಿ ಅರೇಮ್ಮಾ ಭೀಮನಗೌಡನ ಮನೆಯಲ್ಲಿ ಕೆಲಸ ಮಾಡುಕೊಂಡಿದ್ದರು. ಅರೇಮ್ಮಾ ದೇವದಾಸಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಭೀಮನಗೌಡ ಅರೇಮ್ಮಾರ ಮಗಳನ್ನು ಪ್ರೀತಿ ಮಾಡುವ ನಾಟಕ ಮಾಡಿದ್ದ.

ನೀನು ದೇವದಾಸಿಯ ಮಗಳು, ನಾನು ನಿನ್ನನ್ನು ಮದುವೆ ಆಗ್ತೀನಿ ಎಂದು ನಂಬಿಸಿ ಭೀಮನಗೌಡ ಕುಸುಮಾ ಜೊತೆ ದೈಹಿಕ ಸಂಪರ್ಕ ಬೆಳಸಿದ್ದ. ನಂತರ ಕುಸುಮಾ ಗರ್ಭಿಣಿಯಾದಾಗ ಭೀಮನಗೌಡನಿಗೆ ಮದುವೆ ಮಾಡಿಕೋ ಎಂದು ಕೇಳಿಕೊಂಡಿದ್ದರು. ಆದ್ರೆ ಭೀಮನಗೌಡ ಮದುವೆಯಾಗಲು ನಿರಾಕರಿಸಿದ್ದು, ನಿಮ್ಮ ತಾಯಿ ದೇವದಾಸಿ. ನೀನು ಕೂಡ ದೇವದಾಸಿಯಾಗಿ ನೆಮ್ಮದಿಯಾಗಿ ಜೀವನ ಸಾಗಿಸು ಎಂದು ಹೇಳಿದ್ದಾನೆ.

ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ, 2013 ರಲ್ಲಿ ಭೀಮನಗೌಡ ಇತರೆ 5 ಜನರ ಸಹಾಯದಿಂದ ಕುಸಮಾರನ್ನು ಅಪಹರಿಸಿ ಗ್ರಾಮದ ಹಳ್ಳದಲ್ಲಿ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದ.

2013ರಲ್ಲಿ ಕುಸುಮಾ ಅಪಹರಣದ ಬಗ್ಗೆ ಅರೇಮ್ಮಾ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ಪೊಲೀಸರು ಕೇಸ್ ದಾಖಲಿಸಿಕೊಂಡಿರಲಿಲ್ಲ. ಕೊನೆಗೆ 2016ರ ಅಕ್ಟೋಬರ್‍ನಲ್ಲಿ ಅರೇಮ್ಮಾ ಎಸ್‍ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದಾಗ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು, ಆರೋಪಿ ಭೀಮನಗೌಡ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ನಿನ್ನೆ (ಸೋಮವಾರ) ಸಹಾಯಕ ಆಯುಕ್ತ ಡಾ.ಜಗದೀಶ್ ಹಾಗೂ ಸುರಪುರ ಠಾಣಾ ಪೊಲೀಸರ ನೇತೃತ್ವದಲ್ಲಿ ಕುಸುಮಾರ ಶವದ ಅವಶೇಷಗಳನ್ನು ಹೊರ ತೆಗಯಲಾಗಿದೆ. ತನ್ನ ಮಗಳು ಸುರಕ್ಷಿತವಾಗಿ ಪತ್ತೆಯಾಗಿ ನನ್ನ ಮಡಿಲಿಗೆ ಸೇರುತ್ತಾಳೆಂದು ಕಳೆದ ನಾಲ್ಕು ವರ್ಷದಿಂದ ಹಂಬಲಿಸುತ್ತಿದ್ದ ತಾಯಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *