ಬಿಯರ್ ಬಾಟಲ್ ನಿಂದ ಹೊಡೆದು ಕೊಲೆಗೈದ – ಡೆಡ್ ಬಾಡಿ ಬಿಸಾಕಿ ಆಕ್ಸಿಡೆಂಟ್ ಅಂತ ಬಿಂಬಿಸಿದಾತ ಅರೆಸ್ಟ್

Public TV
2 Min Read

ಚಿಕ್ಕಬಳ್ಳಾಪುರ: ಕುಡಿಯಲು ಬಾರ್ ಗೆ ಬಂದಿದ್ದ ತಮ್ಮದೇ ಊರಿನ ಗ್ರಾಮಸ್ಥನನ್ನೇ ಯುವಕನೊಬ್ಬ ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದು, ಅಪಘಾತ ಅಂತ ಬಿಂಬಿಸಿದ್ದ ಪ್ರಕರಣದ ಆಸಲಿಯತ್ತನ್ನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ.

ಮೇ 30 ರಂದು ಶಿಡ್ಲಘಟ್ಟ ತಾಲೂಕು ಜೆ.ವೆಂಕಟಾಪುರ ಗ್ರಾಮದ ಬದನೆ ಕೆರೆ ಏರಿಯ ಬಳಿ ಹೊಸಪೇಟೆ ಗ್ರಾಮದ ಸುಬ್ರಮಣಿ(50) ಮೃತದೇಹ ಹಾಗೂ ಬೈಕ್ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಅಪಘಾತದ ತರ ಕಾಣುತ್ತಿದ್ದರೂ ಬೇರೆ ಏನೋ ನಡೆದಿದೆ ಅನ್ನೋ ಸಂಶಯ ಪೊಲೀಸರನ್ನ ಕಾಡಿತ್ತು. ಈ ಸಂಬಂಧ ತನಿಖೆ ನಡೆಸಿದ ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ಪ್ರದೀಪ್ ಪೂಜಾರಿ, ಪ್ರಕರಣದ ಆಸಲಿಯತನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಗಾರ ಮೃತ ಸುಬ್ರಮಣಿ ಗ್ರಾಮದವನೇ ಆದ 25 ವರ್ಷದ ಶಿವು ಎಂದು ಪತ್ತೆ ಹಚ್ಚಿ ಈಗ ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:
ಮೇ 29 ರಂದು ತರಕಾರಿ ವ್ಯಾಪಾರ ಮಾಡಿಕೊಂಡು ದುಡ್ಡು-ಕಾಸು ಇಟ್ಟಿದ್ದ ಮೃತ ಸುಬ್ರಮಣಿಯನ್ನ ಪುಸಲಾಯಿಸಿ ಮದ್ಯ ಕುಡಿಯಲು ಜಂಗಮಕೋಟೆ ಕ್ರಾಸ್ ಬಳಿ ಮಾರುತಿ ಬಾರ್ ಗೆ ಶಿವು ಮತ್ತು ಆತನ ಸ್ನೇಹಿತರು ಕರೆದುಕೊಂಡು ಹೋಗಿದ್ದಾರೆ. ಬಾರ್ ನಲ್ಲಿ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶಿವು ಹಾಗೂ ಸುಬ್ರಮಣಿ ನಡುವೆ ಮಾತಿನ ಚಕಮಕಿ ನಡೆದು, ಸುಬ್ರಮಣಿ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ.

ಈ ವೇಳೆ ಹಲ್ಲೆಗೊಳಗಾದ ಸುಬ್ರಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿಕ್ಕು ತೋಚದ ಶಿವು ತನ್ನ ಸ್ನೇಹಿತರ ಜೊತೆಗೂಡಿ ಮೃತದೇಹ ಹಾಗೂ ಆತನ ಬೈಕನ್ನು ಹತ್ತಿರದ ಬದನೆ ಕೆರೆಯ ಏರಿಯ ಮೇಲೆ ಬಿಸಾಡಿ ಹೋಗಿದ್ದಾನೆ. ನಂತರ ಪೊಲೀಸರು ಪ್ರಕರಣದ ತನಿಖೆಗಿಳಿದು ಮೃತ ಸುಬ್ರಮಣಿ ಘಟನೆಯ ದಿನ ಕುಡಿದ ಅಮಲಿನಲ್ಲಿ ಇದ್ದ ಮಾಹಿತಿ ಅರಿತು ಕೊಂಡಿದ್ದಾರೆ. ಬಳಿಕ ಕುಡಿಯಲು ಜೊತೆಯಲ್ಲಿ ಹೋದವರನ್ನ ಕರೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ನಡೆದ ಘಟನೆಯ ಸತ್ಯವನ್ನು ಶಿವು ಒಪ್ಪಿಕೊಂಡಿದ್ದಾನೆ. ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರರಿಗಾಗಿಯೂ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದಡೆ ಆರೋಪಿ ಶಿವು ಈ ಹಿಂದೆಯೂ ಕೊಲೆ ಪ್ರಕರಣದ ಆರೋಪಿಯಾಗಿದ್ದನು. ಆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಜಾಮೀನಿನ ಮೇಲೆ ಹೊರಗಡೆ ಬಂದಿದ್ದ.

Share This Article
Leave a Comment

Leave a Reply

Your email address will not be published. Required fields are marked *