ವೀಡಿಯೋ: ನದಿ ಮಧ್ಯಭಾಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಮಂಡ್ಯದ ಯುವಕ

Public TV
1 Min Read

ಮಂಡ್ಯ: ನದಿಯ ಮಧ್ಯಭಾಗದಲ್ಲಿ ಸಿಲುಕಿದ್ದ 7 ಜನರನ್ನ ಯುವಕನೊಬ್ಬ ರಕ್ಷಿಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.

ಬಟ್ಟೆ ತೊಳೆಯಲು ಹೋಗಿ ನದಿ ಮಧ್ಯೆ ಪ್ರಾಣಾಪಾಯದಲ್ಲಿ ಸಿಲುಕಿದ್ದ ಏಳು ಜನರು ಪ್ರಾಣ ಭಯದಿಂದ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ 30 ವರ್ಷದ ರವಿ ಎಂಬ ಯುವಕ ಟ್ಯೂಬ್ ಸಹಾಯದಿಂದ ನದಿಗೆ ಇಳಿದು ಒಬ್ಬೊಬ್ಬರನ್ನೇ ರಕ್ಷಿಸಲು ಮುಂದಾಗಿದ್ದು, 4 ಜನರನ್ನು ರಕ್ಷಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಉಳಿದವರನ್ನೂ ರಕ್ಷಿಸಿದ್ದಾರೆ.

ನಡೆದಿದ್ದೇನು?: ಇಂದು ಬೆಳಗ್ಗೆ ಗ್ರಾಮದ ಸಮೀಪದ ಹರಿಯುವ ಹೇಮಾವತಿ ನದಿಯಲ್ಲಿ ಮಹದೇವಮ್ಮ, ಚಲುವನಾಯಕ, ಕೋಮಲ, ಶೋಭಾ, ಚಂದ್ರೇಶ್, ರಾಜಮಣಿ, ಲಕ್ಷ್ಮಣ್ ನಾಯಕ್ ಎಂಬ ಏಳು ಜನ ಬಟ್ಟೆ ತೊಳೆಯಲು ಹೋಗಿದ್ದಾರೆ. ಶುಕ್ರವಾರ ಸಂಜೆಯಿಂದ ನದಿಗೆ ಏಕಾಏಕಿ ನೀರು ಬಿಟ್ಟಿದ್ದರಿಂದ ಇಂದು ಬೆಳಗ್ಗೆ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಬಟ್ಟೆ ತೊಳೆಯಲು ಹೋದ ಏಳು ಜನರೂ ನದಿ ಮಧ್ಯೆ ಸಿಲಿಕಿಕೊಂಡು ವಾಪಸ್ ದಂಡೆಗೆ ಬರಲಾಗದೇ ಭಯಭೀತರಾಗಿದ್ದರು. ನದಿ ನೀರು ಹೆಚ್ಚಾದಂತೆಲ್ಲ ಬಂಡೆ ಮೇಲೆ ಹತ್ತಿ ಕುಳಿತ ಏಳು ಮಂದಿ ಪ್ರಾಣ ಭಯದಿಂದ ಸಹಾಯಕ್ಕಾಗಿ ಕೂಗಿಕೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದ್ರು.

ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ರವಿ ನದಿಗೆ ಇಳಿದು ರಕ್ಷಣೆ ಮಾಡಲು ಮುಂದಾಗಿದ್ದರು. ರವಿ ನಾಲ್ಕು ಜನರನ್ನು ರಕ್ಷಿಸುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಗ್ಗ ಮತ್ತು ಬೋಟ್ ಬಳಸಿ ಇನ್ನುಳಿದವರನ್ನೂ ರಕ್ಷಿಸಿದ್ದಾರೆ. ಯುವಕನ ಕೆಲಸವನ್ನ ಅಗ್ನಿಶಾಮಕ ಸಿಬ್ಬಂದಿ ಮತ್ತು ಸುತ್ತಮುತ್ತಲ ಗ್ರಾಮದ ಜನ ಶ್ಲಾಘಿಸಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *