ಗಣೇಶ ವಿಸರ್ಜನೆ ವೇಳೆ ಚಾಕು ಇರಿತ – ವಿದ್ಯಾರ್ಥಿ ಸಾವು

Public TV
1 Min Read

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿದಿದ್ದರಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬಸವರಾಜ್ ವಿರೇಶ್ ಶಿವುರ (21) ಮೃತಪಟ್ಟ ವಿದ್ಯಾರ್ಥಿ. ಬಸವರಾಜ್ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಬಸವರಾಜ್ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದನು.

ಗುರುವಾರ ಬಸವರಾಜ್ ತನ್ನ ಗೆಳೆಯರ ಜೊತೆ ಗಣೇಶ ವಿಸರ್ಜನೆ ನೋಡಲು ಬಂದಿದ್ದನು. ಈ ವೇಳೆ ಹರ್ಷ ಕಾಂಪ್ಲೆಕ್ಸ್ ಕಡೆ ಗಲಾಟೆಯಾಗಿ ಗಣೇಶ ಮೆರವಣಿಗೆ ನೋಡುತ್ತ ನಿಂತಿದ್ದ ಬಸವರಾಜ್‍ನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜ್‍ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ರಾತ್ರಿ ನಗರದ ಐದು ಕಡೆ ಚಾಕು ಇರಿತವಾಗಿದೆ. ಹರ್ಷ ಕಾಂಪ್ಲೆಕ್ಸ್, ದುರ್ಗದ ಬೈಲ್ ನಲ್ಲಿ ಎರಡು ಕಡೆ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತವಾಗಿದೆ.

ಈ ಕುರಿತು ಶಹರ, ಉಪನಗರ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *