ವಿಚಿತ್ರವಾಗಿ ಹೇರ್ ಕಟ್ಟಿಂಗ್- ಯುವಕನಿಗೆ ದಂಡ ಹಾಕಿದ ಮುಸ್ಲಿಂ ಮುಖಂಡರು

Public TV
1 Min Read

ಮಡಿಕೇರಿ: ವಿಚಿತ್ರವಾಗಿ ಕೂದಲು ಕತ್ತರಿಸಿದ್ದಕ್ಕೆ ಮುಸ್ಲಿಂ ಮುಖಂಡರು ಕೊಡಗಿನ ಯುವಕನಿಗೆ ದಂಡ ಹಾಕಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಅಂಚೆ ಗುಂಡಿಕೆರೆ ಗ್ರಾಮದ ‘ಶಾಫಿ ಮುಸ್ಲಿಂ ಜಮಾಯತ್’ ಕೆಲವು ತಿಂಗಳಿಂದ ಗ್ರಾಮದ ಯುವಕರಿಗೆ ‘ಪರಿವರ್ತನೆಯ ಪಾಠ’ ಮಾಡುತ್ತಿದೆ. ಗ್ರಾಮದ ಬಹುತೇಕ ಯುವಕರಲ್ಲಿ ಶಿಸ್ತು ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ನಿಜಾಂ ಎಂಬ ಯುವಕ ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದ. ಅದನ್ನು ಗಮನಿಸಿದ ಜಮಾಯತ್ ಸದಸ್ಯರು, ಆ ಯುವಕ ಹಾಗೂ ಅವರ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಅದಕ್ಕೂ ಕ್ಯಾರೆ ಎನ್ನದಿದ್ದಾಗ ದಂಡ ಪ್ರಯೋಗದ ಅಸ್ತ್ರ ಬಳಸಿದ್ದರು.

ಜೂನ್ 21ರಂದು ದಂಡದ ಆದೇಶ ಹೊರಡಿಸಿದ್ದು, ಅದರಲ್ಲಿ `ನೀವು ಜಮಾಯತ್‍ನ ಸದಸ್ಯರಾಗಿದ್ದು ನಮ್ಮ ತೀರ್ಮಾನದ ವಿರುದ್ಧವಾಗಿ ತಲೆ ಕೂದಲು ಬೆಳೆಸಿರುವ ಕಾರಣಕ್ಕೆ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಪತ್ರದಿಂದ ಹೆದರಿದ ನಿಜಾಂ ಸೇರಿದಂತೆ ಮೂವರು ಯುವಕರು ಭಾನುವಾರ ನಡೆದ ಆಡಳಿತ ಮಂಡಳಿ ಸಭೆಯ ಸ್ಥಳಕ್ಕೆ ಕೂದಲು ತೆಗೆಸಿ ಶಿಸ್ತಿನಿಂದ ಬಂದಿದ್ದರು ಎಂದು ಜಮಾಯತ್ ಸದಸ್ಯರು ತಿಳಿಸಿದರು. ಗುಂಡಿಗೆರೆ ಜಿಲ್ಲೆಯಲ್ಲಿ ಮಾದರಿ ಗ್ರಾಮ. ಎಲ್ಲ ಧರ್ಮದ ಜನರೂ ಇಲ್ಲಿ ನೆಲೆಸಿದ್ದಾರೆ. ಸೌಹಾರ್ದ ಮೂಡಿಸುವ ಉದ್ದೇಶದಿಂದ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಮಾದರಿ ಜಮಾಯತ್ ಆಗಿಯೂ ರೂಪುಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *