ಪ್ರೇಮ ವೈಫಲ್ಯದಿಂದ ನದಿಗೆ ಹಾರಿದ ಯುವಕ – ಕೊನೆಗೆ ತಾನೇ ಈಜಿ ದಡ ಸೇರಿದ

Public TV
1 Min Read

ಮಂಗಳೂರು: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬ ಕೊನೆಗೆ ತಾನೇ ಈಜಿ ದಡ ಸೇರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾಸರಗೋಡಿನ ಮಂಜೇಶ್ವರ ಬಳಿಯ ತೂಮಿನಾಡು ನಿವಾಸಿ ನೌಫಲ್ (23) ನದಿಗೆ ಹಾರಿದ್ದ ಯುವಕ. ಈತ ಮಂಗಳೂರು – ಉಳ್ಳಾಲ ಸಂಪರ್ಕಿಸುವ ನೇತ್ರಾವತಿ ಸೇತುವೆಯ ಮೇಲ್ಭಾಗದಿಂದ ಹಾರಿದ್ದು ಕೊನೆಯ ಕ್ಷಣದಲ್ಲಿ ಈಜುತ್ತಾ ಸೇತುವೆಯ ಪಿಲ್ಲರ್ ಹತ್ತಿ ಕುಳಿತಿದ್ದಾನೆ.

ನೌಫಲ್ ತನ್ನ ಸ್ನೇಹಿತನ ಜೊತೆಗೆ ಟೆಂಪೊ ಚಲಾಯಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದನು. ಆದರೆ ನೇತ್ರಾವತಿ ಸೇತುವೆ ಮಧ್ಯೆ ತಲುಪಿದಾಗ ತನಗೆ ವಾಂತಿ ಬರುತ್ತಿದೆ ಎಂದು ಹೇಳಿ ಟೆಂಪೊ ನಿಲ್ಲಿಸಿದ್ದಾನೆ. ಬಳಿಕ ಸೇತುವೆಯ ಬದಿಗೆ ಹೋದ ನೌಫಾಲ್, ವಾಂತಿ ಮಾಡುವ ನೆಪದಲ್ಲಿ ನೇತ್ರಾವತಿ ನದಿಗೆ ಹಾರಿದ್ದಾನೆ. ನದಿಗೆ ಬಿದ್ದ ಯುವಕ ಕೊನೆಗೆ ನೀರಿನಿಂದ ಮೇಲಕ್ಕೆ ಬರುತ್ತಲೇ ಬದುಕಿದೆಯಾ ಬಡ ಜೀವವೇ ಎನ್ನುತ್ತಾ ಈಜತೊಡಗಿದ್ದು, ಸೇತುವೆಯ ಪಿಲ್ಲರ್ ಬಳಿಗೆ ತೆರಳಿ ಸ್ಲ್ಯಾಬ್ ಹತ್ತಿ ಕುಳಿತಿದ್ದಾನೆ.

ಇದನ್ನು ವೀಕ್ಷಿಸಲು ಸೇತುವೆಯ ಮೇಲೆ ಕುತೂಹಲಿಗರ ದಂಡೇ ಸೇರಿತ್ತು. ಮಂಗಳೂರು ನಗರ ಟ್ರಾಫಿಕ್ ಪೊಲೀಸರು, ಸಾರ್ವಜನಿಕರ ಸಹಕಾರದಿಂದ ನೌಫಲ್‍ನನ್ನು ಮೇಲ್ಗಡೆ ತಂದು ಬಳಿಕ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆದರೆ ಪ್ರೇಮ ವೈಫಲ್ಯಗೊಂಡ ಕಾರಣ ಸಾಯಲು ನಿರ್ಧರಿಸಿ ನದಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *