ನೀವು ಬದುಕಿರುವ ಶವಗಳು ನಿಮಗೆ ಧಿಕ್ಕಾರವಿರಲಿ: ನಟ ಜಗ್ಗೇಶ್ ಕಿಡಿ

Public TV
1 Min Read

ಬೆಂಗಳೂರು: ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47% ಮತದಾನವಾದರೆ, ಬೆಂಗಳೂರು ಉತ್ತರದಲ್ಲಿ 54.63% ಹಾಗೂ ಬೆಂಗಳೂರು ಕೇಂದ್ರದಲ್ಲಿ 53.53% ಮತದಾನ ನಡೆದಿದೆ. ಇದನ್ನೂ ಓದಿ: ಮತದಾನ ಮಾಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯರು!

ಹೆರಿಗೆಗೆ ಇನ್ನೂ ಕೆಲವೇ ನಿಮಿಷಗಳು ಇರುವಾಗ ಮತಗಟ್ಟೆಗೆ ಬಂದು ಮತದಾನ ಮಾಡಿ ಬಳಿಕ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ಕೊಟ್ಟ ಮಹಿಳೆಯೊಬ್ಬರ ಬಗ್ಗೆ ಪತ್ರಿಕೆಯೊಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು, ಮತದಾನ ಮಾಡದ ನತದೃಷ್ಟರಿಗಿಂತ ಈ ಗರ್ಭಿಣಿ ಮಹಿಳೆ ಶ್ರೇಷ್ಠ ಭಾರತೀಯರು. ತುಂಬು ಗರ್ಭಿಣಿಯೇ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿದ್ದಾರೆ. ಆದ್ರೆ ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವ ಜನರು ಮತದಾನ ಮಾಡದೇ ಮೋಜು-ಮಸ್ತಿಯಲ್ಲಿಯೇ ಬದುಕುತ್ತಿದ್ದಾರೆ. ಮತದಾನ ಮಾಡದವರು ಬದುಕಿರುವ ಶವಗಳು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಬೆಂಗಳೂರು ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರಿಗಿಂತ ನೀವು ನನ್ನ ಕಣ್ಣಲ್ಲಿ ಶ್ರೇಷ್ಠ ಭಾರತೀಯಳಾಗಿ ಕಂಡಿರಿ ಸಹೋದರಿ! ನಿಮ್ಮ ಆದರ್ಶ ಮಾನದಂಡವಾಗಲಿ. ತಂದೆ ತಾಯಿ, ಸಂಸ್ಕೃತಿ, ದೇಶ ಸರ್ವನಾಶವಾದರು ಸಹಿಸಿ ತಮ್ಮ ಸುಖ ಶ್ರೇಷ್ಠವೆಂದು ಮತಹಾಕದೇ ಮೋಜು-ಮಸ್ತಿಗಾಗಿಯೇ ಬದುಕುತ್ತಿರುವ ನತದೃಷ್ಟರಿಗೆ, ನೀವು ಬದುಕಿರುವ ಶವಗಳು ನಿಮಗೆ ಧಿಕ್ಕಾರವಿರಲಿ.

Share This Article
Leave a Comment

Leave a Reply

Your email address will not be published. Required fields are marked *