ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ 75ನೇ ಜನ್ಮದಿನ. 5 ದಶಕಗಳ ಹೋರಾಟ ರಾಜಕಾರಣ ಮಾಡಿಕೊಂಡು ಬಂದಿರುವ ಬಿಎಸ್ ಯಡಿಯೂರಪ್ಪಗೆ ಈ ಹುಟ್ಟುಹಬ್ಬ ವಿಶೇಷ ಮತ್ತು ಮಹತ್ವದ್ದಾಗಿದೆ.
ಬಿಎಸ್ ಯಡಿಯೂರಪ್ಪರ 75ನೇ ಹುಟ್ಟುಹಬ್ಬವನ್ನು ರೈತ ಸಮಾವೇಶದ ಮೂಲಕ ವಿಶೇಷವಾಗಿ ಆಚರಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಮಾಯಕೊಂಡ ಕ್ಷೇತ್ರದ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ರಂಗಸ್ವಾಮಿ ನಿವಾಸಕ್ಕೆ ಬಿಎಸ್ವೈ ಇಂದು ಭೇಟಿ ನೀಡಲಿದ್ದಾರೆ. ರಂಗಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ.
ಬಳಿಕ ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಪಾಲ್ಗೊಳ್ಳಲಿದ್ದು, ಈ ವೇಳೆ ಲಕ್ಷಾಂತರ ರೈತರೊಂದಿಗೆ ಬಿಎಸ್ವೈ ತಮ್ಮ 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಲ್ಲದೇ ಹುಟ್ಟು ಹಬ್ಬದ ಪ್ರಯುಕ್ತ ಬಿಎಸ್ ಯಡಿಯೂರಪ್ಪರಿಗೆ ಪ್ರಧಾನಿ ನರೇಂದ್ರ ಮೋದಿ 4 ಕೆಜಿ ತೂಕದ ತೇಗದ ನೇಗಿಲು ನೀಡಿ ಸನ್ಮಾನ ಮಾಡಲಿದ್ದಾರೆ. ಹಾಗಾಗಿ ಬಿಎಸ್ವೈ 75 ನೇ ಹುಟ್ಟುಹಬ್ಬ ವಿಶೇಷವಾದದ್ದು ಎಂದು ಆಪ್ತರು ಹೇಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ 6028 ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಕಾರ್ಯಕರ್ತರು ಮುಷ್ಠಿ ಅಕ್ಕಿ ಅಭಿಯಾನ ನಡೆಸಲಿದ್ದಾರೆ. ಪ್ರಧಾನಿ ಮೋದಿಯ ಇಂದಿನ ಭಾಷಣ ಕುತೂಹಲ ಕೆರಳಿಸಿದ್ದು, ರೈತರ ಸಮಸ್ಯೆ, ಮಹದಾಯಿ ವಿವಾದ, ರೈತರ ಸಾಲಮನ್ನಾದ ಬಗ್ಗೆ ಮಾತನಾಡ್ತಾರಾ ಕಾದು ನೋಡಬೇಕಿದೆ. ಇನ್ನು ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾವೇರಿ, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳ ರೈತರನ್ನ ದೃಷ್ಟಿಯಲ್ಲಿಟ್ಟುಕೊಂಡು ಮಧ್ಯ ಕರ್ನಾಟಕದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಇದನ್ನು ಓದಿ: ಮತ್ತೆ ರಾಜ್ಯಕ್ಕೆ ಮೋದಿ ಆಗಮನ, ದಾವಣಗೆರೆಯ ರೈತ ಸಮಾವೇಶದಲ್ಲಿ ಪ್ರಧಾನಿ ಭಾಗಿ