ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

Public TV
1 Min Read

ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ನಿರ್ಣಾಯಕ ಸಂಘರ್ಷಕ್ಕೆ ಇಳಿದಿರುವ ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಇಂದು ಕೇಂದ್ರ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದರು.

ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್ ಭೇಟಿಯಾದ ಯತ್ನಾಳ್ ಅವರು ವಿಜಯೇಂದ್ರ (Vijayendra) ಮತ್ತು ಯಡಿಯೂರಪ್ಪ ವಿರುದ್ಧ ಆರು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಪಾಠಕ್ ಕೇಳಿದ ಪ್ರಶ್ನೆಗಳಿಗೆ ಸುದೀರ್ಘ ಉತ್ತರವನ್ನು ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ವಿಚಾರಣೆ ಮುಗಿಸಿ ನಗುನಗುತ್ತಾ ಹೊರಬಂದ ಯತ್ನಾಳ್, ನಿಮಗೆ ಉತ್ತಮ ಭವಿಷ್ಯವಿದೆ. ಸ್ವಲ್ಪ ತಾಳ್ಮೆಯಲ್ಲಿ ಇರಬೇಕು. ಪಕ್ಷದ ವಿಚಾರ ಹೊರಗೆ ಮಾತನಾಡಬೇಡಿ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಇದರ ಜೊತೆ ವಕ್ಫ್ ಹೋರಾಟ ಮುಂದುವರೆಸುವಂತೆ ಸೂಚನೆಯೂ ಸಿಕ್ಕಿದೆ ಎಂದರು. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ?

ಶಿಸ್ತು ಸಮಿತಿ ಮುಂದೆ ಯತ್ನಾಳ್‌ ಹೇಳಿದ್ದೇನು?
ನಾನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದು ಕೆಲವರ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದೇನೆ. ವಂಶ ಪಾರಂಪರ್ಯ, ಭ್ರಷ್ಟಾಚಾರದ ವಿರುದ್ಧ ಪಕ್ಷವಿದೆ. ನಾನು ಪಕ್ಷದ ನೀತಿ, ಮೋದಿ ಅವರ ಮಾದರಿ ಅನುಸರಿಸಿದ್ದೇನೆ.

 

ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸೀಮಿತ ನಾಯಕರ ಗುಂಪನ್ನು ಕಟ್ಟಿಕೊಂಡಿದ್ದಾರೆ. ಮೂರು ಉಪ ಚುನಾವಣೆ ಸೋಲಿಗೆ ಗುಂಪುಗಾರಿಕೆಯೂ ಕಾರಣ. ಸರ್ಕಾರದ ಜೊತೆ ವಿಜಯೇಂದ್ರ ಅಡ್ಜೆಸ್ಟ್‌ಮೆಂಟ್‌ ಮಾಡಿಕೊಂಡಿದ್ದಾರೆ. ನಾನು ಹಿಂದುತ್ವವನ್ನು ಸಮರ್ಥಿಸಿಕೊಂಡಿದ್ದೇನೆ.ಇದು ಪಕ್ಷ ವಿರೋಧಿಯೇ?

 

Share This Article