ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ದ್ವಂದ್ವದಲ್ಲಿ ನಾನು ಇದ್ದೇನೆ: ಎಲ್ ರೇವಣಸಿದ್ದಯ್ಯ

Public TV
1 Min Read

ಮೈಸೂರು: ಮಾಜಿ ಪೋಲಿಸ್ ಅಧಿಕಾರಿ ಲಿಂಗಾಯತ ಮುಖಂಡ ಎಲ್ ರೇವಣಸಿದ್ದಯ್ಯ ಅವರು ಬಹಿರಂಗವಾಗಿ ಕಾಂಗ್ರೆಸ್ ಮತ್ತು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂಗಾಗಿ ನನ್ನ ಸಮುದಾಯದ ವಿರೋಧ ಕಟ್ಟಿಕೊಂಡು ಪ್ರಚಾರ ಮಾಡಿದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದೆ. ಸಿದ್ದರಾಮಯ್ಯ ಗೆದ್ದ ನಂತರ ನನಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಇದು ನನಗೆ ಬೇಸರ ಮೂಡಿಸಿದೆ ಎಂದರು.

ನನಗೆ ಕಾಂಗ್ರೆಸ್ ನಲ್ಲಿ ಬೇಸರವಾಗಿದೆ. ಆದರೆ ಯಾವ ಕಾರಣಕ್ಕೆ ಬೇಸರ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ಎಂಬ ದ್ವಂದ್ವ ದಲ್ಲಿ ನಾನಿರುವುದು ಸತ್ಯ ಎಂದು ಸ್ಪಷ್ಟಪಡಿಸಿದರು.

ಸಿಎಂ ಜೊತೆ ಮಾತನಾಡುತ್ತೇನೆ. ನನಗಾಗಿರುವ ನೋವುಗಳನ್ನು ಅವರ ಮುಂದೆ ಹೇಳುತ್ತೇನೆ. ತದನಂತರದಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ. ಭಾವನಾತ್ಮಕವಾದ ನೋವುಗಳು ನನಗೆ ಆಗಿವೆ ಎಂದರು.

ಡಾ. ಯತೀಂದ್ರ ಅವರು ಪ್ರತಿಕ್ರಿಯಿಸಿ, ರೇವಣ್ಣಸಿದ್ದಯ್ಯ ಅವರಿಗೆ ಅಸಮಾಧಾನವಾಗಿರುವುದು ಸತ್ಯ. ಹಾಗಾಗಿ ಇಂದು ಮಾತುಕತೆಗೆ ಬಂದಿದ್ದೇನೆ. ತಂದೆಯ ಸೂಚನೆ ಮೇರೆಗೆ ಮಾತುಕತೆಗೆ ಬಂದಿದ್ದೇನೆ. ನಮ್ಮ ತಂದೆ ರೇವಣ್ಣಸಿದ್ದಯ್ಯ ಜೊತೆ ಮಾತನಾಡಿದ ತಕ್ಷಣ ಸಮಸ್ಯೆ ಬಗೆಹರಿಯುತ್ತದೆ. ರೇವಣ್ಣಸಿದ್ದಯ್ಯ ಅವರು ಕಾಂಗ್ರೆಸ್ ಬಿಡುವುದಿಲ್ಲ. ನನ್ನ ಪರವಾಗಿ ಪ್ರಚಾರ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಬಿಎಸ್‍ವೈ ಪುತ್ರ ಬಿವೈ ವಿಜಯೇಂದ್ರ ಅವರು ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ರೇವಣಸಿದ್ದಯ್ಯ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರತೊಡಗಿದೆ.

Share This Article
Leave a Comment

Leave a Reply

Your email address will not be published. Required fields are marked *