ಬಯಲುಸೀಮೆ ಪ್ರಜೆಗಳ ನೀರಾವರಿ ಯೋಜನೆಗೆ ಮುಕ್ತಿ ಸಿಗುತ್ತಾ?

Public TV
2 Min Read

ಕೋಲಾರ: ಜಿಲ್ಲೆಯ ಹೆಸರು ಕೇಳಿದರೆ ಸಾಕು ಬಯಲುಸೀಮೆ ಬರಗಾಲದಿಂದ ಕುಡಿದ ಪ್ರದೇಶ ಎಂಬ ಮಾತು ನೆನಪಿಗೆ ಬರುತ್ತದೆ. ಇಷ್ಟು ಬರಗಾಲವಿದ್ದರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿಗೆ ಪ್ರತಿನಿತ್ಯ ಬೇಕಾದ ಹಾಲು, ತರಕಾರಿಯನ್ನು ಪೂರೈಸುತ್ತಿರುವ ಹೆಮ್ಮೆ ಈ ಜಿಲ್ಲೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರು, ಇಲ್ಲಿನ ಜನರ ನೀರಿನ ದಾಹ ತಿರುವ ಸೂಚನೆ ಕಾಣಿಸುತ್ತಿಲ್ಲ ಏಕೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.

ಕೋಲಾರ ಹಾಗೂ ಜಿಲ್ಲೆಯಾದ್ಯಂತ ಸುರಿಯುವ ಮಳೆ ನೀರು ವ್ಯರ್ಥವಾಗಿ ಆಂಧ್ರ ಹಾಗೂ ತಮಿಳುನಾಡಿಗೆ ಹರಿದು ಹೋಗುತ್ತಿದ್ದು, ನೀರನ್ನು ತಡೆದು ಕೋಲಾರ, ಬಂಗಾರಪೇಟೆ, ಕೆಜಿಎಫ್, ಮಾಲೂರು ಪಟ್ಟಣಗಳು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಯರಗೋಳ್ ಯೋಜನೆ ಆರಂಭಿಸಲಾಗಿತ್ತು. ಆದರೆ ಯೋಜನೆ ಆರಂಭವಾಗಿ 10 ವರ್ಷಗಳೇ ಕಳೆದರು ಯೋಜನೆ ಮಾತ್ರ ಶೇ.10 ರಷ್ಟೂ ಪ್ರಗತಿ ಕಂಡಿಲ್ಲ. ಕಮಿಷನ್ ಆಸೆಗಾಗಿ ಅಂದಿನ ಕೆಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಎಲ್ಲೆಡೆ ಪೈಪ್‍ಲೈನ್ ಕೆಲಸ ಮುಗಿಸಿದ್ದಾರೆ. ಆದರೆ ನೀರನ್ನು ಶೇಖರಣೆ ಮಾಡಲು ಪ್ರಮುಖವಾಗಿ ನಿರ್ಮಾಣ ಮಾಡಬೇಕಾಗಿದ್ದ ಡ್ಯಾಂ ನಿರ್ಮಾಣ ಕಾರ್ಯ ಮಾತ್ರ ಹಳ್ಳ ಹಿಡಿದಿದೆ.

ಕಳೆದ ನಾಲ್ಕು ವರ್ಷಗಳಿಂದ ಯರಗೋಳು ಯೋಜನೆ ಆರಂಭಿಸಲು ಇದ್ದ ಬಹಳಷ್ಟು ತೊಡಕುಗಳನ್ನು ನಿವಾರಣೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಯೋಜನೆಗೆ ಬೇಕಿದ್ದ ಸುಮಾರು 128 ಎಕರೆ ಅರಣ್ಯ ಭೂಮಿಗೆ ಅರಣ್ಯ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆ. ಅಲ್ಲದೇ ಭೂಮಿ ನೀಡಲು ಒಪ್ಪದ ಸ್ಥಳೀಯ ರೈತರ ಮನವೊಲಿಸಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಯೋಜನೆಗೆ ಬೇಕಿರುವ 240 ಕೋಟಿ ರೂಪಾಯಿ ಹಣ ಸರ್ಕಾರ ಬಿಡುಗಡೆ ಮಾಡಿದೆ. ಹೀಗಿರುವಾಗ ಉದ್ದೇಶ ಪೂರ್ವಕವಾಗಿ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ. ನೀರು ಬರುತ್ತೆ ಅನ್ನುವ ನಂಬಿಕೆಯಿಂದ ಕಾದು ಕುಳಿತಿರುವ ಈ ಭಾಗದ ರೈತರ ಕಷ್ಟವನ್ನು ಸರ್ಕಾರ ಹಾಗೂ ರಾಜಕೀಯ ಮುಖಂಡರು ನೋಡುತ್ತಿಲ್ಲ.

ಪ್ರಸ್ತುತ ಅಪರೂಪಕ್ಕೆಂಬಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದರು ಈ ನೀರನ್ನು ಸರಿಯಾದ ಸಮಯದಲ್ಲಿ ಬಳಕೆ ಮಾಡಲಾಗದೆ ರೈತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ಯೋಜನೆ ಮುಗಿಸಿ ನಮ್ಮ ನೀರನ್ನ ನಾವು ಬಳಸಲು ಅವಕಾಶ ಮಾಡಿಕೊಡಿ ಎಂದು ಇಲ್ಲಿನ ಜನರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *