ಇವನರ್ವ, ಇವನರ್ವ ಎಂದು ಡೈಲಾಗ್ ಹೇಳಿದ್ದಕ್ಕೆ ಯಕ್ಷಗಾನ ಹಾಸ್ಯ ಕಲಾವಿದ ಅಮಾನತು!

Public TV
2 Min Read

ಮಂಗಳೂರು: ಯಕ್ಷಗಾನದಲ್ಲಿ ರಾಜಕೀಯ ಪ್ರೇರಿತ ಪದವನ್ನು ಬಳಕೆ ಮಾಡಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದರು ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.

ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕ ಎಂಬಲ್ಲಿ ನಡೆದಿದೆ ಎನ್ನಲಾದ ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ಯ ಪ್ರಸಂಗದ ಒಂದು ಸನ್ನಿವೇಶದಲ್ಲಿ “ಇವನರ್ವ, ಇವನರ್ವ” ಎಂದು ಡೈಲಾಗ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣಾ ಆಯೋಗದ ಕಚೇರಿಯಿಂದ ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದರು.

ಸದ್ಯ ಮೂಡಬಿದ್ರೆ ಚುನಾವಣಾ ಕಚೇರಿ ಯಿಂದ ನೋಟಿಸ್ ಜಾರಿಯಾಗಿದ್ದು, ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಆದೇಶ ನೋಟಿಸ್ ನಲ್ಲಿದೆ.

ಚುನಾವಣಾ ಆಯೋಗದ ಕ್ರಮಕ್ಕೆ ಕಲಾವಿದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಪೂರ್ಣೇಶ್ ಆಚಾರ್ಯ ಅವರು ಕೇರಳ ರಾಜ್ಯದ ಕಾಸರಗೋಡುವಿನ ಮಾನ್ಯದಲ್ಲಿ ನಡೆದ ಪ್ರದರ್ಶನದ ವೇಳೆ ಈ ಡೈಲಾಗ್ ಹೇಳಿದ್ದಾರೆ. ಹೀಗಾಗಿ ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಇವನರ್ವ ಪದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕಲಾವಿದ ಪೂರ್ಣೇಶ್ ಆಚಾರ್ಯ, ಯಕ್ಷಗಾನದಲ್ಲಿ ಹಾಸ್ಯವಾಗಿ ಬಳಕೆ ಮಾಡಿದ್ದೇನೆ ಹೊರತು ಇಲ್ಲಿ ಎಲ್ಲೂ ರಾಜಕೀಯ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ. ಅಷ್ಟೇ ಅಲ್ಲದೇ ಯಾವ ಆಧಾರವನ್ನು ಇಟ್ಟುಕೊಂಡು ಆಯೋಗ ನನ್ನ ಮೇಲೆ ಕ್ರಮಕ್ಕೆ ಸೂಚಿಸಿದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದರು.

ದೂರಿನಲ್ಲಿ ಉಲ್ಲೇಖವಾಗಿರುವಂತೆ ಏಪ್ರಿಲ್ 1 ರಂದು ಪಡುಮರ್ನಾಡ್ ಬಳಿಯ ಬನ್ನಡ್ಕದಲ್ಲಿ ಕಲಾವಿದ ಪೂರ್ಣೆಶ್ ಆಚಾರ್ಯ ಯಕ್ಷಗಾನದಲ್ಲಿ ಭಾಗವಹಿಸಿರಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಕಟೀಲು ಮೇಳದ ವ್ಯವಸ್ಥಾಪಕರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳನ್ನು ಹೇಳುವ ಸಂದರ್ಭದಲ್ಲಿ “ಇವನರ್ವ, ಇವನರ್ವ, ಇವನರ್ವ ಇವನಮ್ವ, ಇವನಮ್ವ, ಇವನಮ್ವ” ಎಂದು ಸ್ಪಷ್ಟವಾಗಿ ಉಚ್ಚಾರಣೆ ಮಾಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

https://www.youtube.com/watch?v=PkOxyBGcxqU

https://www.youtube.com/watch?v=8kW6xyEWF3A

Share This Article
Leave a Comment

Leave a Reply

Your email address will not be published. Required fields are marked *