ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ರಾಜ ಮನೆತನಕ್ಕೆ ಸರ್ಕಾರ ನೀಡುತ್ತಾ ಬಂದಿರುವ ಗೌರವಧನದ ಕುರಿತು ಈ ವರ್ಷವು ವಿವಾದಕ್ಕೀಡಾಗಿದೆ.
ಇತಿಹಾಸ ತಜ್ಞ ಪ್ರೋ.ನಂಜರಾಜೇ ಅರಸ್ ಈ ಬಗ್ಗೆ ಆಕ್ಷೇಪ ಎತ್ತಿದ್ದು, ಯದುವಂಶದ ರಾಜಮಾತೆ ಪ್ರಮೋದೇವಿ ಅವರಿಗೆ ಸರ್ಕಾರ ನೀಡುವ 36 ಲಕ್ಷ ರೂ. ಹಣವನ್ನು ಈ ವರ್ಷವಾದರೂ ರದ್ದು ಪಡಿಸಿ, ಅದನ್ನು ಕೊಡಗಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಇತಿಹಾಸ ತಜ್ಞ ನಂಜರಾಜ ಅರಸ್ ಹಲವು ವರ್ಷಗಳಿಂದ ಮೈಸೂರು ರಾಜಮನೆತನಕ್ಕೆ ಸರ್ಕಾರ ದಸರಾ ಸಂದರ್ಭದಲ್ಲಿ ನೀಡುವ ಗೌರವಧನ ರದ್ದುಗೊಳಿಸಬೇಕೆಂದು ಆಗ್ರಹಿಸುತ್ತಲೇ ಬರುತ್ತಿದ್ದಾರೆ. ಈ ಬಾರಿಯೂ ಗೌರವ ಧನ ನೀಡಬೇಡಿ ಎಂದು ಒತ್ತಾಯಿಸಿರುವ ನಂಜರಾಜ ಅರಸ್ ಯಾಕಾಗಿ ರಾಜಮನೆತನಕ್ಕೆ ಸರ್ಕಾರ ತಲೆ ಬಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾಡಳಿತವನ್ನು 2012 ರಿಂದ 2016-17ರವರೆಗೆ ಎಷ್ಟು ಹಣವನ್ನು ಗೌರವಧನ ರೂಪದಲ್ಲಿ ನೀಡಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಜಿಲ್ಲಾಡಳಿತ 1 ಕೋಟಿ 36 ಲಕ್ಷ ರೂಪಾಯಿ ನೀಡಿದ್ದೇವೆ ಎಂದು ಹೇಳಿದೆ.
ಸರ್ಕಾರ ನೀಡುವ ಹಣ ಹಾಗೂ ರಾಜಮನೆತನದವರು ತೆಗೆದುಕೊಳ್ಳುವ ಹಣ ಸಾರ್ವಜನಿಕ ಹಣವಾಗಿದೆ. ಆದ್ದರಿಂದ ಈ ಬಾರಿಯಾದರೂ ಸರ್ಕಾರ ಆ ಹಣವನ್ನು ಕೊಡಗಿಗೆ ನೀಡಬೇಕು. ಇಲ್ಲವಾದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಾದರೂ ಸ್ವಇಚ್ಛೆಯಿಂದ ಹಣ ಬೇಡವೆಂದೋ ಅಥವಾ ಅವರೇ ವೈಯಕ್ತಿಕವಾಗಿ ಗೌರವಧನವನ್ನು ಕೊಡಗಿಗೆ ನೀಡಬೇಕು ಅಂತ ಕನ್ನಡ ವೇದಿಕೆ ಅಧ್ಯಕ್ಷ ಬಾಲು ಅವರು ಹೇಳಿದ್ದಾರೆ.
ಪ್ರತಿ ಬಾರಿ ಗೌರವಧನ ನೀಡುವ ಬಗ್ಗೆ ಗೊಂದಲ ಉಂಟಾಗುತ್ತಿದ್ದು, ಈ ಬಾರಿ ಕೊಡಗಿನ ಸಂತ್ರಸ್ತರು ಈ ಹಣದ ಉಪಯೋಗ ಪಡೆಯಲಿ ಅನ್ನೋ ಕೂಗು ಕೇಳಿಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv