ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ- ಪೊಲೀಸರ ಮೇಲೆ ಹಲ್ಲೆ, ಪಿಎಸ್‍ಐಗೆ ಅವಾಜ್

Public TV
1 Min Read

ಯಾದಗಿರಿ: ಕಾರ್ ಪಾರ್ಕಿಂಗ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಯಾದಗಿರಿಯಲ್ಲಿ ಮಾರಾಮಾರಿ ನಡೆದಿದೆ. ಜೆಡಿಎಸ್ ಅಜೇಯ್ ರೆಡ್ಡಿ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಶಶಿಧರ್ ರೆಡ್ಡಿಯ ಇಬ್ಬರ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಮೊದಲಿಗೆ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಜಗಳ ತೆಗೆದು ಶಶಿಧರ್ ರೆಡ್ಡಿ ಬೆಂಬಲಿಗರಾದ ಯಲ್ಲಾಲಿಂಗ ಮತ್ತು ಶಂಕರಪ್ಪನ ಮೇಲೆ ಅಜೇಯ ರೆಡ್ಡಿ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಯಲ್ಲಾಲಿಂಗ ಮತ್ತು ಶಂಕರಪ್ಪ ತೀವ್ರವಾಗಿ ಗಾಯಗೊಂಡು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೇ ವೇಳೆ ಮತ್ತೆ ಆಸ್ಪತ್ರೆಗೆ ಗುಂಪು ಕಟ್ಟಿಕೊಂಡು ನುಗ್ಗಿದ ಅಜೇಯ ರೆಡ್ಡಿ ಬೆಂಬಲಿಗರು ಮತ್ತೆ ಯಲ್ಲಾಲಿಂಗ ಮತ್ತು ಶಂಕರಪ್ಪ ಮೇಲೆ ಪೊಲೀಸರ ಎದುರು ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಗಲಾಟೆಯಲ್ಲಿ ಪೊಲೀಸರ ಮೇಲೆಯೂ ಸಹ ಅಜೇಯ ರೆಡ್ಡಿ ಕಡೆಯವರು ಹಲ್ಲೆ ಮಾಡಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಬಂದ ಶಶಿಧರ್ ರೆಡ್ಡಿಯನ್ನು ತುರ್ತು ಚಿಕಿತ್ಸಾ ಘಟಕ್ಕೆ ಪೊಲೀಸರ ಬಿಟ್ಟಿಲ್ಲ. ಇದರಿಂದ ಕೋಪಗೊಂಡ ಶಶಿಧರ್ ರೆಡ್ಡಿ ನಗರ ಠಾಣೆಯ ಪಿಎಸ್‍ಐ ಸೌಮ್ಯ ಅವರಿಗೆ ಬಾಯಿಗೆ ಬಂದಂತೆ ಮಾತನಾಡಿ, ಅವಾಜ್ ಸಹ ಹಾಕಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *