ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬೇಕಿದೆ ಶೌಚಾಲಯ, ಕರೆಂಟ್, ಕುಡಿಯುವ ನೀರಿನ ವ್ಯವಸ್ಥೆ

Public TV
2 Min Read

ಯಾದಗಿರಿ: ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜಿನಲ್ಲಿ ಕಲಿಯಬೇಕಾದ್ರೆ ಪ್ರಯಾಸ ಪಡುವಂತಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತೆ ಆದ್ರೆ, ಶಿಕ್ಷಣದ ಜೊತೆಗೆ ಸಿಗೋ ಸೌಲಭ್ಯಗಳು ಮಾತ್ರ ನಿಜಕ್ಕೂ ಮರೀಚಿಕೆಯಾಗಿದೆ. ವಿದ್ಯಾರ್ಥಿನಿಯರ ಹಿತದೃಷ್ಠಿಗೋಸ್ಕರ ಸರ್ಕಾರದಿಂದ ಶೌಚಾಲಯದ ಜೊತೆ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಅಂತಾ ವಿದ್ಯಾರ್ಥಿನಿಯರು ಪಬ್ಲಿಕ್ ಟಿವಿಗೆ ಮೊರೆ ಬಂದಿದ್ದಾರೆ.

ಹೌದು. ಯಾದಗಿರಿ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಲಾ ಮಹಾವಿದ್ಯಾಲಯ. ಈ ಎರಡು ಕೋಣೆಯ ಕಟ್ಟಡದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರವೇಶವನ್ನು ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ಬರಬೇಕಾದರೆ ನೀರು, ಉಪಹಾರವನ್ನು ಸೇವಿಸದೆ ಕಾಲೇಜಿಗೆ ಬಂದು ಕಲಿಯುವ ಪರಿಸ್ಥಿತಿ ಎದುರಾಗಿದೆ.

ಯಾಕೆಂದರೆ ಇಲ್ಲಿ ಶೌಚಾಲಯವಿಲ್ಲದುದ್ದರಿಂದ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು 18ಕಿ.ಮೀ ದೂರದಲ್ಲಿರುವ ಜಿಲ್ಲಾಕೇಂದ್ರಕ್ಕೆ ಹೋಗಿ ಕಲಿಯುತ್ತೆವೆ ಅಂದ್ರೂ ಕೆಲವು ಮನೆಗಳಲ್ಲಿ ವಿದ್ಯಾರ್ಥಿನಿಯರನ್ನು ಕಳುಹಿಸುವುದಿಲ್ಲ. ಸರ್ಕಾರ ಬಡತನದಲ್ಲಿರುವ ಮಕ್ಕಳು ಮಾತನಾಡುವುದಿಲ್ಲ ಅಂತಾ ನಮಗೆ ಇಂತಹ ಸ್ಥಿತಿಯಲ್ಲಿ ಕಲಿಯುವ ವ್ಯವಸ್ಥೆಯನ್ನು ಒದಗಿಸಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲುತೋಡಿಕೊಂಡಿದ್ದಾರೆ.

ಯರಗೋಳ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವೀತಿಯ ಪಿಯುಸಿಯಲ್ಲಿ ಒಟ್ಟು 68 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 50 ವಿದ್ಯಾರ್ಥಿನಿಯರು ಇದ್ದಾರೆ. ನಮ್ಮ ಕಾಲೇಜಿನಲ್ಲಿ ಪ್ರಾಚಾರ್ಯ ಹುದ್ದೆ, ಆಂಗ್ಲ ಭಾಷೆಯ ಉಪನ್ಯಾಸಕರು ಹಾಗೂ ದೈಹಿಕ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಇನ್ನೂ ಯರಗೋಳ ಹೋಬಳಿ ಇರುವುದರಿಂದ ಸುತ್ತ-ಮುತ್ತ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳು ಮೂಲ ಸೌಲಭ್ಯವಿಲ್ಲದಕ್ಕೆ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಹಲವು ಬಾರಿ ನಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದ್ರೆ ಇದೂವರೆಗೂ ನಮ್ಮ ಕಾಲೇಜಿನಲ್ಲಿ ವಿದ್ಯುತ್ ಕೂಡ ಅಧಿಕೃತವಿಲ್ಲ. ಮುಖ್ಯವಾಗಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಹುಮುಖ್ಯವಾಗಿ ಶೌಚಾಲಯವನ್ನು ನಿರ್ಮಿಸಿಬೇಕು. ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಶಾಲಾ ಪ್ರಾಚಾರ್ಯರು ಹೇಳಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮಟ್ಟ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನೂ ಜಾರಿ ಮಾಡಿದ್ರೂ ಪ್ರಯೋಜನವಿಲ್ಲ ಅನ್ನೋದಿಕೆ ಈ ಕಾಲೇಜೇ ನಿದರ್ಶನವಾಗಿದೆ. ಇನ್ನೂ ಸರ್ಕಾರ, ಕೇಂದ್ರ ಸರ್ಕಾರವು ನಾಮ ಕೆ ವಾಸ್ತೆ ಸ್ವಚ್ಚ ಭಾರತ ಯೋಜನೆಯಲ್ಲಿ ನಿರ್ಮಿಸಿಕೊಳ್ಳಿ ಅಂತ ಜನರಿಗೆ ಹೇಳುವ ಬದಲು ಮುಖ್ಯವಾಗಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸುವ ಕೆಲಸವನ್ನು ಮಾಡಿದಾಗ ಮಾತ್ರ ಪಕ್ಕದ ಜಿಲ್ಲೆ ಕಲಬುರಗಿ ಗಡಿ ಭಾಗದ ಹಾಗೂ ಯರಗೋಳ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಇಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅನಕೂಲವಾಗುತ್ತೆ ಎನ್ನುವುದು ಅಲ್ಲಿನ ಸಾರ್ವಜನಿಕರ ಆಶಯವಾಗಿದೆ.

https://www.youtube.com/watch?v=o0MA95W5Ke8

Share This Article
Leave a Comment

Leave a Reply

Your email address will not be published. Required fields are marked *