ಕುಡಿದ ಪೊಲೀಸರಿಂದ ಹಲ್ಲೆ ಆರೋಪ – ದೇಶದ ಅತ್ಯುನ್ನತ ಪ್ರಶಸ್ತಿ ಹಿಂದಿರುಗಿಸಲು ಮುಂದಾದ ಕುಸ್ತಿಪಟುಗಳು

Public TV
3 Min Read

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಕಳೆದ ಕೆಲವು ದಿನಗಳಿಂದ ದೆಹಲಿಯ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿರುವ ಮೂವರು ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಅಂತ್ಯಗೊಳಿಸಿದೆ. ಎಫ್ಐಆರ್‌ಗಳನ್ನು ದಾಖಲಿಸಿರುವುದು ಮತ್ತು 7 ದೂರುದಾರರಿಗೆ ಸೂಕ್ತ ಭದ್ರತೆ ಒದಗಿಸಿರುವುದನ್ನು ಪರಿಗಣಿಸಿ ನಿರ್ಧಾರ ಕೈಗೊಂಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಅವರ ನೇತೃತ್ವದ ನ್ಯಾಯಪೀಠ, ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ನಿವೃತ್ತ ಅಥವಾ ಹಾಲಿ ಹೈಕೋರ್ಟ್ ನ್ಯಾಯಮೂರ್ತಿ ನಿಗಾವಣೆಗೆ ಒಪ್ಪಿಸುವಂತೆ ಹೇಳಿ ಕುಸ್ತಿಪಟುಗಳ ಪರ ವಕೀಲರು ಮಾಡಿದ ಮೌಖಿಕ ಮನವಿ ಪರಿಗಣಿಸಲು ನಿರಾಕರಿಸಿತು. ಇದನ್ನೂ ಓದಿ: ನನ್ನನ್ನ ನೇಣಿಗಾದ್ರೂ ಹಾಕಿ, ಆದ್ರೆ ಕುಸ್ತಿ ನಿಲ್ಲಿಸಿದ್ರೆ ನಿಮ್ಮ ಭವಿಷ್ಯಕ್ಕೆ ಹಾನಿ – ಬ್ರಿಜ್‌ಭೂಷಣ್ ಭಾವುಕ ಹೇಳಿಕೆ

FIR ದಾಖಲಿಸುವುದು ಮತ್ತು ದೂರುದಾರರಿಗೆ ಭದ್ರತೆ ಒದಗಿಸುವ ನಿರ್ದಿಷ್ಟ ಮನವಿಗಳೊಂದಿಗೆ ನೀವು ಇಲ್ಲಿಗೆ ಬಂದಿದ್ದೀರಿ. ನಿಮ್ಮ ಬೇಡಿಕೆಯನ್ನ ಈಡೇರಿಸಲಾಗಿದೆ. ಇನ್ನೂ ಬೇರೆ ಮನವಿಗಳಿದ್ದರೆ ನೀವು ಹೈಕೋರ್ಟ್ ಅಥವಾ ಆ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌ ನರಸಿಂಹ ಮತ್ತು ಜೆಬಿ ಪರ್ಡಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠ, ಪ್ರಕರಣದ ಅರ್ಜಿಯ ವಿಚಾರಣೆಯನ್ನು ಅಂತ್ಯಗೊಳಿಸುವುದಾಗಿ ಹೇಳಿತ್ತು. ಈ ಬೆನ್ನಲ್ಲೇ ಕುಸ್ತುಪಟುಗಳ ಮೇಲೆ ಹಲ್ಲೆ ನಡೆದಿದೆ.

ಪೊಲೀಸರು – ಕುಸ್ತಿಪಟುಗಳ ನಡುವೆ ಜಟಾಪಟಿ:
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ಕುಡಿದ ಅಮಲಿನಲ್ಲಿದ್ದ ಪೊಲೀಸರು ಬುಧವಾರ ರಾತ್ರಿ ಹಲ್ಲೆ ನಡೆಸಿರುವುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳನ್ನು ತರಲು ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ.

ಕೆಲವು ಕುಸ್ತಿಪಟುಗಳ ತಲೆಗೆ ಹೊಡೆತ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ. ಒಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 2016ರ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಟೋರಿ ಬೋವಿ ಅನುಮಾನಾಸ್ಪದ ಸಾವು

ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ಅವರು ಅನುಮತಿ ಇಲ್ಲದೇ ಪ್ರತಿಭಟನಾ ಸ್ಥಳಕ್ಕೆ ಹಾಸಿಗೆಗಳೊಂದಿಗೆ ಬಂದಿದ್ದರು. ಪೊಲೀಸರು ಮಧ್ಯಪ್ರವೇಶ ನಡೆಸಿದಾಗ ಸಣ್ಣ ಜಗಳ ನಡೆಯಿತು. ಬಳಿಕ ಎಎಪಿ ನಾಯಕ ಹಾಗೂ ಇತರೆ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಪ್ರಶಸ್ತಿ ಹಿಂದಿರುಗಿಸಲು ಸಿದ್ಧ:
ಪೊಲೀಸರು ಹಲ್ಲೆ ನಡೆಸಿದ ಬಳಿಕ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ. ಇದು ಹೀಗೆ ಮುಂದುವರಿದರೆ ನಾವು ನಮ್ಮ ಎಲ್ಲ ಪದಕಗಳು ಮತ್ತು ಪ್ರಶಸ್ತಿಗಳನ್ನ ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ಬಳಿಕ ಕುಸ್ತಿ ಬಿಟ್ಟು ಸಾಮಾನ್ಯ ಜೀವನ ನಡೆಸುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ.

ವಿನೇಶ್, ಸಾಕ್ಷಿ ಮತ್ತು ಬಜರಂಗ್ ಮೂವರೂ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ʻಖೇಲ್ ರತ್ನʼ ಸ್ವೀಕರಿಸಿದ್ದಾರೆ. ಸಾಕ್ಷಿ ಮಲಿಕ್‌ 2017 ರಲ್ಲಿ ಮತ್ತು ಬಜರಂಗ್ ಪೂನಿಯಾ 2019 ರಲ್ಲಿ ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಸದ್ಯ ಪೊಲೀಸರಿಂದ ಹಲ್ಲೆ ನಡೆದ ಹೊರತಾಗಿಯೂ ಕ್ರೀಡೋತ್ಸಾಹ ನಿಲ್ಲಿಸದ ಕುಸ್ತಿಪಟುಗಳು ಜಂತರ್‌ ಮಂತರ್‌ನಲ್ಲೇ ಕುಸ್ತಿ ತರೆಬೇತಿ ನಡೆಸಲು ಮುಂದಾಗಿದ್ದಾರೆ.

Share This Article