ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ – ಕುಸ್ತಿಪಟುಗಳ ಸ್ಪಷ್ಟನೆ

Public TV
3 Min Read

ನವದೆಹಲಿ: ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೂ ಅಲ್ಲ, ಬ್ರಿಜ್‌ ಭೂಷಣ್‌ ವಿರುದ್ಧ ಮಾತ್ರ ನಮ್ಮ ಪ್ರತಿಭಟನೆ (Wrestler Protest) ಎಂದು ಒಲಿಂಪಿಕ್ಸ್‌ (Olympic) ಪದಕ ವಿಜೇತೆ ಸಾಕ್ಷಿ ಮಲಿಕ್‌ ಹಾಗೂ ಪತಿ ಸತ್ಯವರ್ತ್‌ ಕಡಿಯಾನ್‌ ಹೇಳಿದ್ದಾರೆ.

ರಾಜಕೀಯ ಪ್ರೇರಿತವೆಂಬ (Politically Motivated) ಟೀಕೆಗಳಿಗೆ ಗುರಿಯಾಗಿದ್ದ ತಮ್ಮ ಹೋರಾಟದ ಬಗ್ಗೆ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

WFI ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಲೈಂಗಿಕ ಆರೋಪ ಹೊರಿಸಿ ಹಲವು ದಿನಗಳಿಂದ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದರು. ದೆಹಲಿ ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಹಾಗಾಗಿ ಕುಸ್ತಿಪಟುಗಳ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಆರೋಪಿಸಲಾಗಿತ್ತು. ಈ ಕುರಿತು 11 ನಿಮಿಷಗಳ ಸುದೀರ್ಘ ವೀಡಿಯೋ ಹಂಚಿಕೊಂಡಿರುವ ಸಾಕ್ಷಿ ಮಲಿಕ್‌ ತಮ್ಮ ಹೋರಾಟದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಹೋರಾಟದ ಬಗ್ಗೆ ವದಂತಿಗಳನ್ನ ಹರಡಲಾಗುತ್ತಿದೆ, ನಮ್ಮ ಹೋರಾಟ ರಾಜಕೀಯ ಪ್ರೇರಿತವಲ್ಲ. ಕಳೆದ ಜನವರಿಯಲ್ಲಿ ನಾವು ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆಗೆ ಇಳಿದಾಗಿ ಇಬ್ಬರು ಬಿಜೆಪಿ ನಾಯಕರನ್ನೇ ಕೋರಿ ಪೊಲೀಸರಿಂದ ಅನುಮತಿ ಪಡೆದುಕೊಂಡಿದ್ದೆವು. ಕಳೆದ 10-12 ವರ್ಷಗಳಿಂದ ಕುಸ್ತಿಪಟುಗಳ ಮೇಲೆ ಕಿರುಕುಳ ನಡೆಯುತ್ತಲೇ ಬಂದಿದೆ. 90 ಪ್ರತಿಶಕ್ಕೂ ಹೆಚ್ಚು ಕುಸ್ತಿಪಟುಗಳಿಗೆ ತೊಂದರೆ ಅನುಭವಿಸುತ್ತಿರುವುದು ತಿಳಿದಿತ್ತು. ಆದರೆ ಒಗ್ಗಟ್ಟಿನ ಕೊರತೆಯಿಂದಾಗಿ ಸುಮ್ಮನಿದ್ದೆವು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

ಸಂಸತ್‌ ಮುತ್ತಿಗೆ ನಿರ್ಧಾರ ನಮ್ಮದಲ್ಲ:
ನೂತನ ಸಂಸತ್‌ ಭವನಕ್ಕೆ ಮುತ್ತಿಗೆ ಹಾಕುವ ನಿರ್ಧಾರ ನಮ್ಮದಾಗಿರಲಿಲ್ಲ. ʻಮಹಿಳಾ ಪಂಚಾಯತ್‌ʼನಡೆಸಲು ಉದ್ದೇಶಿಸಿದ್ದು ನಾವಲ್ಲ ಎಂದು ಸ್ಪಷ್ಟಪಡಿಸಿದ ಸತ್ಯವರ್ತ್‌, ಮಹಿಳಾ ಸಮ್ಮಾನ್‌ ಪಂಚಾಯತ್‌ ನಡೆಸಲು ಕೆಲ ಪಂಚಾಯುತ್‌ ಸದಸ್ಯರು ನಿರ್ಧರಿಸಿದ್ದರು. ನಾವು ಅವರ ನಿರ್ಧಾರದಂತೆ ನಡೆದುಕೊಂಡೆವು, ಆದ್ರೆ ಅದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು, ಹೋರಾಟದಲ್ಲಿ ನಮ್ಮನ್ನ ಸಂಪೂರ್ಣ ಕುಗ್ಗುವಂತೆ ಮಾಡಿತು. ಇದನ್ನೂ ಓದಿ: ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

ಕುತಂತ್ರ ಅರ್ಥ ಮಾಡಿಕೊಳ್ಳಲಿಲ್ಲ:
ಗಂಗಾ ನದಿಗೆ ಪದಕಗಳನ್ನ ಎಸೆಯಲು ಮುಂದಾದಾಗ ನಮ್ಮನ್ನ ತಡೆದರು. ಒಂದು ವೇಳೆ ಪದಕ ಎಸೆದಿದ್ದರೆ ಅದು ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಅದಕ್ಕಾಗಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿದೆವು. ನಾವು ಯಾರದ್ದೋ ಕುತಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎಂಬುದನ್ನ ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಒತ್ತಡದಿಂದಲೇ ತೀರ್ಮಾನ ಕೈಗೊಳ್ಳುತ್ತಿದ್ದೆವು. ಜೀವನಪೂರ್ತಿ ಕುಸ್ತಿ ಆಡಿದರೂ, ಕೆಲ ಸಂದರ್ಭಗಳನ್ನ ನಿಭಾಯಿಸಲು ಸಾಧ್ಯವಾಗಲಿಲ್ಲ. ಹರಿಧ್ವಾರದ ಘಟನೆಯ ಬಳಿಕ ನಮ್ಮ ಬೆಂಬಲಕ್ಕೆ ಇರುವವರು ಯಾರು, ಸರ್ಕಾರದ ಪರವಾಗಿ ಇರುವವರು ಯಾರು ಅನ್ನೋದು ತಿಳಿಯಿತು ಎಂದು ಹೇಳಿಕೊಂಡಿದ್ದಾರೆ.

ನಾವು ಏನಾದರೂ ತಪ್ಪು ಮಾಡಿದ್ರೆ ಕ್ಷಮೆ ಯಾಚಿಸುತ್ತೇವೆ. ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ ಸತ್ಯವರ್ತ್‌, ಕೊನೆಯಲ್ಲಿ ಯಾವುದೇ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಇಲ್ಲದಿದ್ದಾಗ ವ್ಯವಸ್ಥೆಯು ಅದರ ಪ್ರಯೋಜನ ಪಡೆದುಕೊಳ್ಳುತ್ತದೆ. ಆದ್ದರಿಂದ ಯಾವುದೇ ವ್ಯವಸ್ಥೆಯ ವಿರುದ್ಧ ಅನ್ಯಾಯ ಮೆಟ್ಟಿ ನಿಲ್ಲಬೇಕಾದರೆ ಮೊದಲು ಒಗ್ಗಟ್ಟಾಗಿರಿ ಎಂದು ಸಲಹೆ ನೀಡಿದ್ದಾರೆ.

Share This Article