ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ

Public TV
2 Min Read

ಕೋಲಾರ: ಚಿಕನ್ ಎಂದರೆ ಸಾಕಷ್ಟು ಜನರಿಗೆ ಅಚ್ಚು ಮೆಚ್ಚು. ಅದರಲ್ಲೂ ಚಿಕನ್ ಲೆಗ್ ಪೀಸ್ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಚಿಕನ್ ಪ್ರಿಯರೇ ಇನ್ಮುಂದೆ ರೆಸ್ಟೋರೆಂಟ್ ಅಥವಾ ಹೋಟೆಲ್‌ನಿಂದ ತಮ್ಮ ಅಚ್ಚುಮೆಚ್ಚಿನ ಚಿಕನ್ ಖರೀದಿ ಮಾಡಿದ್ರೆ ತಿನ್ನುವ ಮುನ್ನ ಹುಷಾರ್ ಆಗಿರಿ.

ಒಂದೆಡೆ ರೆಸ್ಟೋರೆಂಟ್ ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಮತ್ತೊಂದೆಡೆ ಹೋಟೆಲ್‌ಗೆ ಬೀಗ ಮುದ್ರೆ ಹಾಕುತ್ತಿರುವ ಆಹಾರ ನಿರೀಕ್ಷಕ ಅಧಿಕಾರಿಗಳು. ಇನ್ನೂ ಒಂದೆಡೆ ಚಿಕನ್ ಸೇವಿಸಿ ಆಸ್ಪತ್ರೆ ಪಾಲಾಗಿರುವ ಮಹಿಳೆ. ಇದೆಲ್ಲಾ ನಡೆದಿರುವುದು ಕೋಲಾರದ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿ. ಹೌದು, ಚಿಕನ್ ಲೆಗ್ ಪೀಸ್‌ನಲ್ಲಿ ಹುಳ ಪತ್ತೆಯಾದ ಘಟನೆ ಕೋಲಾರದಲ್ಲಿ ನಡೆದಿದೆ. ಅದೇ ಲೆಗ್ ಪೀಸ್ ಸೇವಿಸಿದ ಮಹಿಳೆ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಪಿಚರ್ಡ್ ರಸ್ತೆಯಲ್ಲಿರುವ ಇಖ್ರಾ ಹೋಟೆಲ್‌ನಲ್ಲಿ ಗುರುವಾರ ಕೆಜಿಎಫ್ ನಗರದ ವಿನೋದ್, ಮನೆಗೆ ಚಿಕನ್ ಲೆಗ್ ಪೀಸ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಮನೆಯಲ್ಲಿ ಮಕ್ಕಳ ಜೊತೆ ಚಿಕನ್ ತಿನ್ನುತ್ತಿದ್ದಾಗ ಲೆಗ್ ಪೀಸ್‌ನಲ್ಲಿ ಹುಳ ಇರುವುದು ಪತ್ತೆಯಾಗಿದೆ. ಇದನ್ನು ತಿಂದ ವಿನೋದ್ ತಾಯಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿದ್ದು, ಕೂಡಲೆ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್ 

ಹಾಳಾದ ಹಾಗೂ ಸುರಕ್ಷಿತವಲ್ಲದ ಚಿಕನ್ ಲೆಗ್ ಪೀಸ್ ನೀಡಿದ ಹಿನ್ನೆಲೆ ಇಖ್ರಾ ಹೋಟೆಲ್ ಸಿಬ್ಬಂದಿಗೆ ಸ್ಥಳೀಯರು ಗ್ರಹಚಾರ ಬಿಡಿಸಿದ್ದಾರೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಅಧಿಕಾರಿಗಳು ಹೊಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್‌ನಲ್ಲಿದ್ದ ಎಲ್ಲಾ ಚಿಕನ್‌ನಲ್ಲಿಯೂ ಹುಳ ಪತ್ತೆಯಾಗಿದೆ. ಬಳಿಕ ಗ್ರಾಹಕ ವಿನೋದ್ ಹೋಟೆಲ್ ಮಾಲೀಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದು, ಹೋಟೆಲ್‌ನಲ್ಲಿದ್ದ ಮತ್ತಷ್ಟು ಚಿಕನ್ ಪೀಸ್‌ನಲ್ಲೂ ಹುಳ ಪತ್ತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲಿಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಯೋಜನವಾಗಿರಲಿಲ್ಲ. ಬಳಿಕ ಕೆಲ ಯುವಕರು ನಗರಸಭೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಹಿನ್ನೆಲೆ, ಸ್ಥಳಕ್ಕೆ ಆಗಮಿಸಿದ ನಗರಸಭೆ ಆಹಾರ ನಿರೀಕ್ಷಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳಪೆ ಗುಣಮಟ್ಟದ ಆಹಾರ ಹಾಗೂ ಹುಳ ಇರುವುದು ಕಂಡು ಬಂದ ಹಿನ್ನೆಲೆ ಹೋಟೆಲ್‌ಗೆ ಬೀಗ ಮುದ್ರೆಯನ್ನು ಹಾಕಿದ್ದಾರೆ. ಅಲ್ಲದೇ ನಗರಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಹೆಚ್ಚಿನ ನಿಗಾ ಇಡುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಸಾವಿರಕ್ಕೂ ಅಧಿಕ ಕೇಸ್ – ಆರು ಸಾವಿರ ಗಡಿದಾಟಿದ ರಾಜ್ಯದ ಸಕ್ರಿಯ ಪ್ರಕರಣ

ಒಟ್ಟಿನಲ್ಲಿ ತಮಗಿಷ್ಟ ಎಂದು ಚಿಕನ್ ತಿನ್ನಬೇಕಾದರೆ ಇನ್ನುಮುಂದೆ ಗುಣಮಟ್ಟ ಪರಿಶೀಲನೆ ಮಾಡಲೇಬೇಕು. ಯಾಮಾರಿ ಎಲ್ಲೆಂದರಲ್ಲಿ ಆಹಾರ ಸೇವನೆ ಮಾಡಿದರೆ, ಅನಾರೋಗ್ಯದ ಜೊತೆಗೆ ಹುಳಗಳು ಫ್ರೀಯಾಗಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Live Tv

Share This Article
Leave a Comment

Leave a Reply

Your email address will not be published. Required fields are marked *