‘ಪತ್ನಿಯನ್ನು ಲವ್ ಮಾಡು’ ಎಂದ ಮಾಲೀಕ – ‘ನನ್ನನ್ನು ಕೈ ಬಿಡಬೇಡ’ ಎಂದ ಯಜಮಾನಿ- ಯುವಕ ಆತ್ಮಹತ್ಯೆ

Public TV
3 Min Read

– ಪತ್ನಿಯನ್ನು ಲವ್ ಮಾಡದೇ ಇದ್ರೆ ಸಂಬಳ ಹಾಕಲ್ಲ ಎಂದಿದ್ದ
– ಸಂಬಂಧವನ್ನು ಮುಂದುವರಿಸುವಂತೆ ಮಾಲೀಕನ ಪತ್ನಿ ದುಂಬಾಲು
– ಸಂಬಂಧ ಬೆಳೆಸು ಎಂದು ಹೇಳಿ ನಂತರ ಕಡಿತಗೊಳಿಸುವಂತೆ ಒತ್ತಡ

ಗಾಂಧಿನಗರ: ಮಾಲೀಕನ ಆಶಯದಂತೆ ಯುವಕ ಆತನ ಪತ್ನಿಯನ್ನು ಪ್ರೀತಿಸಿ, ಸಂಬಂಧ ಬೆಳೆಸಿದ್ದಾನೆ. ನಂತರ ಮಾಲೀಕ ಸಂಬಂಧ ಕೊನೆಗೊಳಿಸುವಂತೆ ಹೇಳಿದ್ದಾನೆ. ಆದರೆ ಮಾಲೀಕನ ಪತ್ನಿ ಸಂಬಂಧ ಮುಂದುವರಿಸುವಂತೆ 19ರ ಯುವಕನಿಗೆ ದುಂಬಾಲು ಬಿದ್ದಿದ್ದಾಳೆ. ಈ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತಿನಲ್ಲಿ ನಡೆದಿದೆ.

ಈ ಘಟನೆ ಅಹ್ಮದಾಬಾದಿನಲ್ಲಿ ನಡೆದಿದ್ದು, ಆತ್ಮಹತ್ಯೆ ನಡೆದು 5 ತಿಂಗಳ ನಂತರ ಪೊಲೀಸ್ ತನಿಖೆಯಲ್ಲಿ ಸಂತ್ಯಾಂಶ ಬೆಳಕಿಗೆ ಬಂದಿದೆ.

ಸಂತ್ರಸ್ತನ ಮೊಬೈಲ್‍ನಲ್ಲಿನ ಮೆಸೇಜ್‍ಗಳಿಂದ ಪ್ರಕರಣ ಮರುಜೀವ ಪಡೆದಿದೆ. ಉದ್ಯೋಗದಾತ ಹಾಗೂ ಆತನ ಪತ್ನಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಹಾಗೂ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತನನ್ನು ನಿಖಿಲ್ ಪರ್ಮಾರ್ ಎಂದು ಗುರುತಿಸಲಾಗಿದೆ.

ನನ್ನ ಪತ್ನಿಯನ್ನು ನೀನು ಪ್ರೀತಿಸಬೇಕು ಎಂದು ನಿಖಿಲ್ ಬಳಿ ಮಾಲೀಕ ಕೇಳಿಕೊಂಡಿದ್ದಾನೆ. ಪ್ರಾರಂಭದಲ್ಲಿ ನಿಖಿಲ್ ಒಪ್ಪಿಗೆ ನೀಡಿರಲಿಲ್ಲ. ನಂತರ ನೀನು ನನ್ನ ಹೆಂಡತಿಯನ್ನು ಪ್ರೀತಿಸುವ ಕುರಿತು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಮಾಲೀಕ ಯುವಕನಿಗೆ ಮೇಲಿಂದ ಮೇಲೆ ಮಾನಸಿಕ ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸುವ ವರೆಗೆ ಸಂಬಳವನ್ನು ನೀಡುವುದಿಲ್ಲ ಎಂದು ಆತನ ಸಂಬಳವನ್ನು ತಡೆ ಹಿಡಿದು, ನನ್ನ ಪತ್ನಿಯನ್ನು ಪ್ರೀತಿಸಲೇಬೇಕು ಎಂದು ದುಂಬಾಲು ಬಿದ್ದಿದ್ದ. ಇದರಿಂದ ಬೇಸತ್ತ ನಿಖಿಲ್ ಮಾಲೀಕ ಪತ್ನಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ.

ಮಾಲೀಕ ವಿವಾಹ ಸಮಾರಂಭದ ವೇಳೆ ಬಳಸುವ ಅಲಂಕಾರ ಸಾಮಗ್ರಿಗಳನ್ನು ರಾಜ್ಯಾದ್ಯಂತ ಸರಬರಾಜು ಮಾಡುವ ಬುಸಿನೆಸ್ ಮಾಡುತ್ತಿದ್ದಾನೆ. ನಿಖಲ್ ಕೆಲಸಕ್ಕೆ ಸೇರಿ 10 ತಿಂಗಳ ನಂತರ ಈ ಕುರಿತು ತನ್ನ ತಂದೆ ಅಶೋಕ್ ಪರ್ಮಾರ್‍ಗೆ ವಿವರಿಸಿದ್ದು, ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಾಲೀಕ ಹಾಗೂ ಆತನ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.

ಆಗ ಅಶೋಕ್ ಕೆಲಸ ಬಿಡುವಂತೆ ತನ್ನ ಮಗನಿಗೆ ಹೇಳಿದ್ದಾರೆ. ಆದರೆ ಜುಲೈ 14, 2019ರಂದು ನಿಖಿಲ್ ಮಾಲೀಕ ಕರೆ ಮಾಡಿ ಸಂಬಳವನ್ನು ಪಡೆಯುವಂತೆ ತಿಳಿಸಿದ್ದಾರೆ. ಮರುದಿನ ನಿಖಿಲ್ ಸಂಬಳ ತೆಗೆದುಕೊಳ್ಳಲು ತೆರಳಿದ್ದಾನೆ. ಆಗ ನಿಖಿಲ್ ತಂದೆಗೆ ಮಾಲೀಕ ಕರೆ ಮಾಡಿ ಮಗನನ್ನು ರಾಜಸ್ಥಾನ ಪ್ರವಾಸಕ್ಕೆ ಕರೆದೊಯ್ಯುವುದಾಗಿ ತಿಳಿಸಿದ್ದಾರೆ. ಆಶ್ಚರ್ಯವೆಂಬಂತೆ ಮಾಲೀಕ ಜುಲೈ 20ರಂದು ನಿಖಿಲ್ ತಂದೆಗೆ ಕರೆ ಮಾಡಿ ಗೋಡೋನ್ ಪ್ರದೇಶದಲ್ಲಿ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.

ಘಟನೆ ನಡೆದು ಮೂರು ತಿಂಗಳ ನಂತರ ಕುಟುಂಬಸ್ಥರು ನಿಖಲ್ ಮೊಬೈಲನ್ನು ಪರಿಶೀಲಿಸಿದ್ದಾರೆ. ಈ ವೇಳೆ ಮಾಲೀಕ ಹಾಗೂ ನಿಖಿಲ್ ನಡುವೆ ನಡೆದ ಮೆಸೇಜ್ ಸಂಭಾಷಣೆಗಳನ್ನು ನೋಡಿದ್ದಾರೆ. ನನ್ನನ್ನು ಗುಲಾಮನಂತೆ ಪರಿಗಣಿಸಬೇಡಿ, ನನ್ನ ಮೇಲೆ ಕರುಣೆ ತೋರಿಸಿ ಎಂದು ನಿಖಿಲ್ ಮಾಲೀಕನಿಗೆ ಮೆಸೇಜ್‍ನಲ್ಲಿ ಕೇಳಿಕೊಂಡಿದ್ದಾನೆ. ನಿಮ್ಮ ಇಷ್ಟದಂತೆ ನಾನು ನಿಮ್ಮ ಹೆಂಡತಿಯನ್ನು ಪ್ರೀತಿಸಿದ್ದೇನೆ. ಇದೀಗ ಇದ್ದಕ್ಕಿದ್ದಂತೆ ಪ್ರೀತಿಸುವುದನ್ನು ನಿಲ್ಲಿಸು ಎಂದು ಹೇಳುತ್ತಿದ್ದೀರಿ ಎಂದು ನಿಖಿಲ್ ಮಾಲೀಕನಿಗೆ ಸಂದೇಶ ಕಳುಹಿಸಿದ್ದ.

45 ವರ್ಷದ ನಿಖಿಲ್ ಮಾಲೀಕ ತನ್ನ 25 ವರ್ಷದ ಪತ್ನಿಯನ್ನು ಪ್ರೀತಿಸಿ, ಅವಳೊಂದಿಗೆ ಸಂಬಂಧ ಬೆಳೆಸುವಂತೆ ತಿಳಿಸಿದ್ದ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಅಲ್ಲದೆ ಮಾಲೀಕನ ಪತ್ನಿ ಸಹ ನಿಖಿಲ್‍ನೊಂದಿಗೆ ಸಂಬಂಧವನ್ನು ಬಿಟ್ಟುಕೊಟ್ಟಿಲ್ಲ. ಇದನ್ನು ಎಂದಿಗೂ ಕೊನೆಗೊಳಿಸಬೇಡ ಎಂದು ಒತ್ತಾಯಿಸಿದ್ದಾಳೆ. ಹೀಗಾಗಿ ಮಾಲೀಕ ಹಾಗೂ ಆತನ ಪತ್ನಿ ಇಬ್ಬರ ಒತ್ತಡವನ್ನು ತಾಳಲಾರದೆ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಚಾರ ತನಿಖೆ ವೇಳೇ ದೃಢಪಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *