ಆಸ್ತಿಗಾಗಿ ನಾದಿನಿಗೆ ಬೆಂಕಿ ಹಚ್ಚಿ ಕೊಲೆಗೈದ ಬಾವ

Public TV
2 Min Read

ಬೆಂಗಳೂರು: ನಾದಿನಿಯ ಹೆಸರಿನಲ್ಲಿ ಇದ್ದ 2 ಎಕರೆ ಜಮೀನು ಆಸೆಗಾಗಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಅಮಾನುಷವಾಗಿ ಸುಟ್ಟುಹಾಕಿರುವ ಘಟನೆ ಬೆಂಗಳೂರು ಹೊರವಲಯದ ಬಿಡದಿಯಲ್ಲಿ ನಡೆದಿದೆ.

ಅಂಬುಜಮ್ಮ (52) ಮೃತ ದುರ್ದೈವಿಯಾಗಿದ್ದು, ರಾಮಯ್ಯ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಘಟನೆಯ ಬಳಿಕ ರಾಮಯ್ಯ ನಾಪತ್ತೆಯಾಗಿದ್ದು, ರಾಮಯ್ಯನ ಪತ್ನಿ ಶಿವಮ್ಮ ಮತ್ತು ಆತನ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಮೃತ ಅಂಬುಜಮ್ಮ ಪತಿ ನಾಗಣ್ಣ ಇಪ್ಪತ್ತು ವರ್ಷಗಳ ಹಿಂದೆ ನಿಧನರಾಗಿದ್ದರು. ಆ ಬಳಿಕ ಕುಟುಂಬದವರ ಹೆಸರಿನಲ್ಲಿ ಇದ್ದ 20 ಎಕರೆ ಜಮೀನಿನಲ್ಲಿ 2 ಎಕರೆ ಅಂಬುಜಮ್ಮ ಹೆಸರಿಗೆ ಬಂದಿತ್ತು. ಈ ಜಮೀನು ತಮಗೆ ನೀಡುವಂತೆ ಪತಿಯ ಅಣ್ಣ ರಾಮಯ್ಯ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ರಾಮಯ್ಯನ ಹಿಂಸೆಯಿಂದ ನೊಂದ ಅಂಬುಜಮ್ಮ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಆದರೆ ಈ ಸಂದರ್ಭದಲ್ಲಿ ಪೊಲೀಸರು ಇಬ್ಬರ ನಡುವೆ ರಾಜಿ ನಡೆಸಿ ಪ್ರಕರಣ ಇತ್ಯರ್ಥಗೊಳಿಸಿದ್ದರು.

ರಾಮಯ್ಯ ಮಾತ್ರ ಮತ್ತೆ ತನ್ನ ಖ್ಯಾತೆ ಮುಂದುವರಿಸಿದ್ದ ಎನ್ನಲಾಗಿದ್ದು, ನಿನ್ನೆ ಈ ಬಗ್ಗೆ ಮಾತನಾಡಲು ಮನೆಗೆ ಕರೆದಿದ್ದ. ಈ ವೇಳೆ ಪೊಲೀಸರೊಂದಿಗೆ ತೆರಳಿದ್ದ ಅಂಬುಜಮ್ಮ ಮಾತನಾಡಿದ್ದರು. ಆದರೆ ಮಾತುಕತೆ ಬಳಿಕ ಪೊಲೀಸರು ಸ್ಥಳದಿಂದ ತೆರಳಿದ್ದು, ಮೊದಲೇ ಯೋಜಿಸಿದಂತೆ ರಾಮಯ್ಯ ಮನೆಯಿಂದ ಅಂಬುಜಮ್ಮರನ್ನು ಹೊರಗೆ ಕರೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿ ತೀವ್ರತೆಯಿಂದ ಸುಟ್ಟು ಹೋಗಿದ್ದ ಅಂಬುಜಮ್ಮರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಇಂದು ನಸುಕಿನ ವೇಳೆ ಅಂಬುಜಮ್ಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾವಿಗೂ ಮುನ್ನ ತನ್ನ ಕೊಲೆಗೆ ಯತ್ನಿಸಿದವರ ವಿರುದ್ಧ ಹೇಳಿಕೆ ನೀಡಿರುವ ಅಂಬುಜಮ್ಮ, ನನ್ನ ಕೊಲೆಗೆ ರಾಮಯ್ಯ, ಶಿವಮ್ಮ, ಬಾಬು, ಮಂಜ, ಸಿದ್ದೇಗೌಡ ಅವರೇ ಕಾರಣ. ಪೊಲೀಸರು ಬಂದಿದ್ದಾರೆ ಎಂದು ಕರೆದರು. ಆಗ ಪೊಲೀಸರು ಬಂದಿದ್ದರೆ ಎಂದು ಕರೆದಿದ್ದಕ್ಕೆ ಮನೆಯಿಂದ ಬಂದೆ, ಕೂಡಲೇ ನನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *