ರಾತ್ರೋರಾತ್ರಿ ಹಬ್ಬಿದ ಈ ವದಂತಿಗೆ ಮಾಂಗಲ್ಯದ ಹವಳ ಒಡೆದು ಹಾಕಿದ ಮಹಿಳೆಯರು!

Public TV
2 Min Read

– ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಯಲ್ಲಿ ಹಬ್ಬಿದ ಗಾಳಿ ಸುದ್ದಿ

ಕೊಪ್ಪಳ/ಬಳ್ಳಾರಿ/ಚಿತ್ರದುರ್ಗ: ಜನ ಮರಳೋ ಜಾತ್ರೆ ಮರುಳೋ ಅನ್ನೋ ಹಾಗೆ ಮಹಿಳೆಯರು ತಮ್ಮ ಮಾಂಗಲ್ಯ ಸರದಲ್ಲಿನ ಹವಳವನ್ನು ರಾತ್ರೋರಾತ್ರಿ ಒಡೆದು ಹಾಕಿರೋ ಘಟನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಮಹಿಳೆಯರು ಮಾಂಗಲ್ಯ ಸರದಲ್ಲಿರೋ ಹವಳ ಮುತ್ತು ಮಾತನಾಡಿ ಪತಿ ಮೃತಪಟ್ಟಿದ್ದಾರೆ ಎಂದು ಹಬ್ಬಿದ ಸುಳ್ಳು ವದಂತಿಗೆ ತಮ್ಮ ಮಾಂಗಲ್ಯ ಸರದಲ್ಲಿನ ಹವಳವನ್ನು ರಾತ್ರಿ ಒಡೆದು ಹಾಕಿದ್ದಾರೆ.

ಮಂಗಳವಾರ ತಡರಾತ್ರಿ ಕೊಪ್ಪಳ ಜಿಲ್ಲೆಯಾದ್ಯಂತ ಹರಡಿದ ಈ ಸುಳ್ಳು ವದಂತಿಗೆ ಹೆದರಿದ ಮಹಿಳೆಯರು ಮಾಂಗಲ್ಯದಲ್ಲಿನ ಕೆಂಪು ಮುತ್ತು(ಹವಳ) ಒಡೆದು ಹಾಕಿದ್ದಾರೆ. ಕಿಡಗೇಡಿಗಳು ಹಬ್ಬಿಸಿದ ಸುಳ್ಳು ವದಂತಿಗೆ ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಬಹುತೇಕ ಗ್ರಾಮದ ಮಹಿಳೆಯರು ಮಾಂಗಲ್ಯ ಸರದಲ್ಲಿನ ಹವಳ ಒಡೆದಿದ್ದಾರೆ. ಅಲ್ದೆ ಈ ಸುಳ್ಳು ವದಂತಿ ಬಗ್ಗೆ ರಾತ್ರಿಯಿಡೀ ಮಹಿಳೆಯರು ಫೋನಾಯಿಸಿ ತಮ್ಮ ಸಂಬಂಧಿಕರಿಗೂ ಹೇಳಿದ್ದಾರೆ. ಇದ್ರಿಂದ ಸುಳ್ಳು ವದಂತಿ ಎಲ್ಲೆಡೆ ಹಬ್ಬಿದೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಹಾಗೂ ದಾವಣಗೆರೆ ತಾಲೂಕಿನ ಕೆಲ ಹಳ್ಳಿಗಳಲ್ಲೂ ಕೂಡ ಇದೇ ರೀತಿಯ ವಿಚಿತ್ರ ಘಟನೆ ನಡೆದಿದೆ. ಮದುವೆಯಾದ ಹೆಣ್ಣು ಮಕ್ಕಳು ಹವಳ ಕುಟ್ಟಿ ಹಾಕದಿದ್ರೆ ಪತಿರಾಯ ಮೃತಪಡುತ್ತಾನೆ ಅನ್ನೋ ವದಂತಿ ಹಬ್ಬಿತ್ತು. ವದಂತಿಯಿಂದ ರಾತ್ರಿಯೆಲ್ಲ ನಿದ್ದೆಗೆಟ್ಟು ಬೆಳಗಿನ ಜಾವ ನಾಲ್ಕು ಗಂಟೆಗೆ ಮಹಿಳೆಯರು ತಾಳಿಗೆ ಪೂಜೆ ಮಾಡಿ ಹವಳ ಕುಟ್ಟಿ ಹಾಕಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲೂ ಕೂಡ ಮಹಿಳೆಯರು ತಾಳಿಯಲ್ಲಿರುವ ಮಣಿಯನ್ನು ಕುಟ್ಟಿ ಹಾಕಿದ್ದಾರೆ. ಬಳ್ಳಾರಿ, ಸಿರುಗುಪ್ಪ, ಸಂಡೂರು, ಕೂಡ್ಲಿಗಿ ತಾಲೂಕಿನಲ್ಲಿ ಮಹಿಳೆಯರು ತಾಳಿಯನ್ನು ಹರಿದು ತಾವೇ ಹವಳವನ್ನು ಕಲ್ಲಿನಿಂದ ಕುಟ್ಟಿದ್ದಾರೆ. ಹವಳ ಒಡೆಯದಿದ್ದರೆ ಗಂಡ ಮೃತಪಡುತ್ತಾರೆಂದು ನಂಬಿ ನಾನಾ ಗ್ರಾಮದ ತಮ್ಮ ಸಂಬಂಧಿಕರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೀಗಾಗಿ ರಾತ್ರಿ ಒಂದು ಗಂಟೆಯಿಂದ ಮಹಿಳೆಯರು ತಾಳಿಯಲ್ಲಿನ ಹವಳವನ್ನ ಕುಟ್ಟಿ ಒಡೆದು ಹಾಕಿದ್ದಾರೆ.

ಚಿತ್ರದುರ್ಗದಲ್ಲೂ ಕೂಡ ಸಮೂಹ ಸನ್ನಿಗೆ ಒಳಗಾದ ಮಹಿಳೆಯರು ತಮ್ಮ ಕತ್ತಿನ ತಾಳಿಯಲ್ಲಿರುವ ಹವಳದ ಮಣಿಗಳನ್ನು ಜಜ್ಜಿ ಪುಡಿ ಮಾಡಿ ಎಸೆಯುತ್ತಿದ್ದಾರೆ. ಯಾರ ಕೊರಳ ಮಣಿಗಳು ಮಾತನಾಡುತ್ತವೋ ಅವರು ಸಾಯುತ್ತಾರೆ ಎಂದು ಜಿಲ್ಲೆಯಾದ್ಯಂತ ಗಾಳಿ ಸುದ್ದಿ ಹಬ್ಬಿದೆ.

Share This Article
Leave a Comment

Leave a Reply

Your email address will not be published. Required fields are marked *