ಸರ್ಕಾರಿ ಬಸ್ಸಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

Public TV
1 Min Read

ಗದಗ: ಚಲಿಸುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲೇ ತುಂಬು ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ನಡೆದಿದೆ.

ಕಾವ್ಯ ಮರಳಹಳ್ಳಿ (28) ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದು, ಮೂಲತಃ ಬಾಲೆಹೋಸುರು ಗ್ರಾಮದ ನಿವಾಸಿಯಾಗಿದ್ದಾರೆ. ಸದ್ಯ ಮಗು ಹಾಗೂ ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಗುತ್ತಲ ದಿಂದ ಸೂರಣಗಿ ಮಾರ್ಗವಾಗಿ ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾವ್ಯರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಕಾವ್ಯ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಇದೇ ವೇಳೆ ಬಸ್ ಚಾಲಕ ಎನ್.ಎಮ್ ಉಪ್ಪಾರ ಹಾಗು ನಿರ್ವಾಹಕ ಕಟ್ಟಣ್ಣವರ್ ಇಬ್ಬರು ಸೇರಿ ತಾಯಿ ಕಾವ್ಯ ಹಾಗೂ ಮಗುವನ್ನು ಬಸ್ಸಿನಲ್ಲೇ ಆಸ್ಪತ್ರೆ ಬಳಿ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಸೂರಣಗಿ ಸರ್ಕಾರಿ ವೈದ್ಯರಿಂದ ತಾಯಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *