150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!

Public TV
3 Min Read

ಮುಂಬೈ: ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಹಂಚಿ ಕಾಟ ಕೊಡುತ್ತಿದ್ದ ವ್ಯಕ್ತಿಯನ್ನು ಸಂತ್ರಸ್ತ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಿ ಪಾಠ ಕಲಿಸಿಕೊಟ್ಟಿದ್ದಾರೆ.

ಮುಲೂಂದ್ ಮೂಲದ ಮಹೇಂದ್ರ ಸಾಲ್ವಿ ಎಂಬಾತ ಪುಣೆಯ ಚಕ್ಕನ್ ಗ್ರಾಮದ ಮಹಿಳೆಯ ಜೊತೆಗೆ ಇದ್ದ ಖಾಸಗಿ ಫೋಟೋವನ್ನು ವಾಟ್ಸಪ್ ನಲ್ಲಿ ಮಹಿಳೆಯರಿಗೆ ಕಳುಹಿಸುತ್ತಿದ್ದ. ನಮಗೆ ಕಳುಹಿಸಬೇಡ ಎಂದು ಮಹಿಳೆಯರು ಹೇಳಿದ್ದರೂ ಆತ ಪದೇ ಪದೇ ಕಳುಹಿಸುತ್ತಿದ್ದ. ಈತನ ಕಾಟದಿಂದ ನೊಂದ ಸಂತ್ರಸ್ತ ಮಹಿಳೆ 150 ಕಿ.ಮೀ ಕ್ರಮಿಸಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಿ ಕ್ಷಮೆ ಕೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತ್ರಸ್ತ ಮಹಿಳೆ ಹೇಳಿದ್ದೇನು?
ಬಿಲ್ಡರ್ ಆಗಿರುವ ಮಹೇಂದ್ರ ಸಾಲ್ವಿ ಜೊತೆ ನನಗೆ ಪರಿಚಯವಿತ್ತು. ಎರಡು ವರ್ಷದ ಹಿಂದೆ ಆತ ನನ್ನಿಂದ 5 ಲಕ್ಷ ರೂ. ಪಡೆದು 6 ತಿಂಗಳಲ್ಲಿ 30 ಲಕ್ಷ ರೂ. ಹಿಂತಿರುಗಿಸುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಆತ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಹಣ ಪಡೆದರೂ ಮರಳಿ ನೀಡಿರಲಿಲ್ಲ. ನನಗೆ ಹಣ ಬೇಕು ಎಂದಾಗ ಆತ ನೀಡದೇ ಜಗಳ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಆತನ ಜೊತೆ ನಾನು ಜಗಳ ಮಾಡಿದ್ದಕ್ಕೆ ಸಿಟ್ಟಾಗಿ ನನ್ನ ಮಾನ ಹರಾಜು ಹಾಕಿ ಬುದ್ಧಿ ಕಲಿಸಲು ಆತನ ಜೊತೆ ನಾನು ಕಳೆದಿದ್ದ ಖಾಸಗಿ ಫೋಟೋವನ್ನು ವಾಟ್ಸಪ್ ನಲ್ಲಿ ಹಾಕಲು ಆರಂಭಿಸಿದ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ಗ್ರೂಪ್‍ಗಳಲ್ಲಿ ಫೋಟೋ:
ಮಹೇಂದ್ರ ಸಾಲ್ವಿ ಮಹಿಳೆ ಜೊತೆಗೆ ಇದ್ದ ಖಾಸಗಿ ಫೋಟೋವನ್ನು ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲು ಆರಂಭಿಸಿದ್ದ. ಈತನಿದ್ದ ಗ್ರೂಪಿನಲ್ಲಿ ಮದುವೆಯಾದ ಮಹಿಳೆಯರಿದ್ದು ಅವರಿಗೆ ಈ ಫೋಟೋದಿಂದ ಮುಜುಗರವಾಗುತಿತ್ತು. ಎಷ್ಟು ಮುಜುಗರ ಆಗುತ್ತಿತ್ತು ಅಂದರೆ ನಾವು ಎಲ್ಲೇ ಹೋದರೂ ನಮ್ಮ ಫೋನ್ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದೇವು. ನಮ್ಮ ಗಂಡಂದಿರು ಆ ಫೋಟೋ ಎಲ್ಲಿ ನೋಡುತ್ತಾರೆಂದು ನಾವು ಭಯದಿಂದ ರಾತ್ರಿಯೆಲ್ಲ ಮಲಗುತ್ತಲೇ ಇರಲಿಲ್ಲ ಎಂದು ಮಹಿಳೆಯರು ಹೇಳಿದ್ದಾರೆ.

ದೂರು ನೀಡಲು ನಿರ್ಧಾರ:
ಈತ ಕುಚೇಷ್ಟೆಯಿಂದ ಬೇಸತ್ತ ಸಂತ್ರಸ್ತೆ ಪುಣೆಯ ರಾಜ್ ಮಾತಾ ಜಿಗಾವ್ ಮಹಿಳಾ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯದರ್ಶಿಯಾದ ಪುಷ್ಪಾ ಮರಾಠೆ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ನಂತರ ಅವರಿಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಅಲ್ಲಿ ದೂರನ್ನು ಸ್ವೀಕರಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಆತನಿಗೆ ಪಾಠ ಕಲಿಸಲು ಮುಂಬೈಗೆ ಹೋಗಿದ್ದಾರೆ. ಬುಧವಾರ ರಾತ್ರಿ 11.30ಕ್ಕೆ ಅವರು ಮುಂಬೈ ತಲುಪಿ ಮುಲೂಂದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆತ ನೀಡಿದ ಮನೆಯ ವಿಳಾಸಕ್ಕೆ ಪೇದೆಯ ಜೊತೆ ಹೋದಾಗ ಮಹಿಳೆಯರಿಗೆ ಶಾಕ್ ಆಗಿತ್ತು. ಆತ ನಾನೊಬ್ಬ ಬಿಲ್ಡರ್ ಹಾಗೂ 4 ರಿಂದ 5 ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಆದರೆ ವಿಳಾಸ ಪತ್ತೆ ಹಚ್ಚಿದಾಗ ಆತನ ಮನೆ ಸ್ಲಮ್ ನಲ್ಲಿರುವುದು ತಿಳಿದಿದೆ. ತುಂಬಾ ಹೊತ್ತು ಆತನಿಗಾಗಿ ಕಾಯುತ್ತಿದ್ದೇವು ಆದರೆ ಅವನು ಹಿಂತಿರುಗಲಿಲ್ಲ. ನಂತರ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ದಾಖಲಿಸಿದೆವು ಎಂದು ಸಂತ್ರಸ್ತೆ ಮಹಿಳೆ ತಿಳಿಸಿದ್ದಾರೆ.

ಈ ದೂರಿನ ನಂತರ ಆ ರಾತ್ರಿಯೇ ಮಹೇಂದ್ರ ಮುಲೂಂದ್ ಪೊಲೀಸ್ ಠಾಣೆಗೆ ಹೋಗಿ ಕ್ಷಮೆ ಕೇಳಿ ಮತ್ತೆ ಎಂದಿಗೂ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಪತ್ರ ಬರೆದು ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಗೆ 5 ಲಕ್ಷ ರೂ. ಹಣವನ್ನು ಮರಳಿ ಕೊಟ್ಟಿದ್ದಾನೆ.

ಚಕ್ಕನ್ ಗ್ರಾಮದಿಂದ ಮುಂಬೈಗೆ 150 ಕಿ.ಮೀ ದೂರವಿದೆ. ಒಟ್ಟಿನಲ್ಲಿ 150 ಕಿ.ಮೀ ದೂರವನ್ನು ಕ್ರಮಿಸಿ ಆತನಿಂದ ಕ್ಷಮೆ ಕೇಳಿಸಿ ಮರಳಿ ಹಣವನ್ನು ಪಡೆಯುವಲ್ಲಿ ಮಹಿಳೆ ಯಶಸ್ವಿಯಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *