ಬೆಂಗಳೂರು: ಅನೈತಿಕ ಸಂಬಂಧ ಬೆಳೆಸಿ ವ್ಯಕ್ತಿಯ ಜೊತೆ ಪತ್ನಿ ಪರಾರಿಯಾಗಿದ್ದಕ್ಕೆ ರೊಚ್ಚಿಗೆದ್ದ ಪತಿ ವ್ಯಕ್ತಿಯ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಸಮೀಪದ ಗೊಲ್ಲಹಳ್ಳಿಯಲ್ಲಿ ನಡೆದಿದೆ.
ಹಾವೇರಿ ಮೂಲದ ಗುಡ್ಡಪ್ಪ (30) ಕೊಲೆಯಾದ ದುರ್ದೈವಿ. ಆರೋಪಿ ಗಿರೀಶ್ ಎಂಬಾತ ಕೊಲೆ ಮಾಡಿ ಈಗ ತಲೆ ಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ಗಿರೀಶ್ ಎಂಬಾತ ಪವಿತ್ರಳನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಪತಿ ಮದ್ಯಕ್ಕೆ ದಾಸನಾಗಿರುವ ವಿಚಾರ ತಿಳಿದು ಪವಿತ್ರ, ಗಿರೀಶ್ ಕುಡಿತವನ್ನು ಬಿಡಿಸುವ ಸಲುವಾಗಿ ಪುನರ್ ವಸತಿ ಕೇಂದ್ರಕ್ಕೆ ಆತನನ್ನು ದಾಖಲಿಸಿದ್ದಳು. ಈ ಕೇಂದ್ರಕ್ಕೆ ಗಿರೀಶ್ ನನ್ನು ಕರೆದೊಯ್ಯಲು ಜಗದೀಶ್ ಎಂಬಾತ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಪವಿತ್ರ ಜಗದೀಶ್ ನಡುವೆ ಪ್ರೇಮಾಂಕರುವಾಗಿದೆ. ಅಷ್ಟೇ ಅಲ್ಲದೇ ಅಕ್ರಮ ಸಂಬಂಧ ಬೆಳೆದು ಕೆಲ ದಿನಗಳ ಹಿಂದೆ ಇವರಿಬ್ಬರು ಪರಾರಿಯಾಗಿದ್ದರು.
ಪತ್ನಿ ಪರಾರಿಯಾಗಿದ್ದನ್ನು ನೋಡಿ ಗಿರೀಶ್ ಮಾನಸಿಕ ಖಿನ್ನತೆಗೆ ಜಾರಿದ್ದ. ಈ ನಡುವೆ ಜಗದೀಶ್ ಮತ್ತು ಪವಿತ್ರಾ ನಡುವಿನ ಅಕ್ರಮ ಸಂಬಂಧ ವಿಚಾರ ಜಗದೀಶ್ ಸ್ನೇಗಿತ ಗುಡ್ಡಪ್ಪನಿಗೆ ತಿಳಿದಿತ್ತು ಎನ್ನುವ ಮಾಹಿತಿ ಸಿಕ್ಕಿದೆ. ಈ ಕಾರಣಕ್ಕಾಗಿ ಶನಿವಾರ ರಾತ್ರಿ ಗಿರೀಶ್ ತನ್ನ ಸ್ನೇಹಿತರ ಜೊತೆ ಸೇರಿ ಗುಡ್ಡಪ್ಪನಿಗೆ ಕಂಟಪೂರ್ತಿ ಕುಡಿಸಿ ಜಗದೀಶ್ ಬಗ್ಗೆ ವಿಚಾರಿಸಿದ್ದಾನೆ.
ಗುಡ್ಡಪ್ಪ ತನಗೆ ಏನೂ ಗೊತ್ತಿಲ್ಲ. ಅವರ ಅಕ್ರಮ ಸಂಬಂಧ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾನೆ. ಆದರೆ ಅನೈತಿಕ ಸಂಬಂಧ ಮಾಹಿತಿ ತಿಳಿದಿದ್ದರೂ ವಿಚಾರವನ್ನು ತನ್ನ ಜೊತೆ ತಿಳಿಸದ್ದಕ್ಕೆ ರೊಚ್ಚಿಗೆದ್ದ ಗಿರೀಶ್ ಗುಡ್ಡಪ್ಪನನ್ನು ಕೊಲೆ ಮಾಡಿದ್ದಾನೆ. ಈ ಕೃತ್ಯಕ್ಕೆ ಗಿರೀಶ್ ಸ್ನೇಹಿತರು ಸಾಥ್ ನೀಡಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯ ಬಂಧನವಾಗಿದೆ. ಪ್ರಮುಖ ಆರೋಪಿ ಗಿರೀಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.