ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ ಮಹಿಳಾ ಪಿಎಸ್‍ಐ!

Public TV
1 Min Read

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ-ಗಾಳಿ ಮುಂದುವರಿದಿದ್ದು, ರಸ್ತೆಗೆ ಬಿದ್ದ ಮರವನ್ನು ಸ್ವತಃ ಪಿಎಸ್‍ಐ ಅವರೇ ತೆರವುಗೊಳಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಮಧ್ಯೆ ರಸ್ತೆಗೆ ಬಿದ್ದ ಮರವನ್ನು ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಸುನಿತಾ ತೆರವುಗೊಳಿಸಿದ್ದಾರೆ. ಸುನಿತಾ ಅವರು ಕರ್ತವ್ಯದ ನಡುವೆ ಮರಗಳ ತೆರವಿಗೆ ಮುಂದಾಗಿರುವುದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಎನ್.ಆರ್.ಪುರ ತಾಲೂಕಿನ ನ್ಯಾಯಾಲಯಕ್ಕೆ ಹೋಗಿ ಬರುವಾಗ ಪಿಎಸ್‍ಐ ಅವರು ದಾರಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ. ಮಳೆ ಗಾಳಿಯಿಂದ ರಸ್ತೆ ಅಡ್ಡಲಾಗಿ ಮರ ಬಿದ್ದಿದೆ. ಆದರೆ ಸ್ಥಳೀಯರು ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲು ಮುಂದಾಗದ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಇದೇ ದಾರಿಯಿಂದಾಗಿ ಪಿಎಸ್‍ಐ ಅವರು ನ್ಯಾಯಾಲಯದಿಂದ ಹಿಂದಿರುಗಿದ್ದು, ದಾರಿ ಮಧ್ಯೆ ಸಿಲುಕಿದ್ದಾರೆ. ಇದನ್ನೂ ಓದಿ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕತ್ತರಿಸಿದ ಮಹಿಳಾ ಅಧಿಕಾರಿ!

ರಸ್ತೆಯಲ್ಲಿ ಬಿದ್ದ ಮರವನ್ನು ಕಂಡ ಪಿಎಸ್‍ಐ ಅವರು ಕೂಡಲೇ ಸಾಮಾನ್ಯರಂತೆ ಮರ ತೆರವಿಗೆ ಮುಂದಾಗಿದ್ದಾರೆ. ಸುನಿತಾ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮಲ್ಲಂದೂರು ರಸ್ತೆಯು ಚಿಕ್ಕಮಗಳೂರು ಹಾಗೂ ಶೃಂಗೇರಿಗೆ ಸಂಪರ್ಕ ಕಲ್ಪಿಸುತ್ತದೆ. ಇತ್ತೀಚೆಗಷ್ಟೇ ಹಾಸನದಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿತ್ತು. ಮಹಿಳಾ ಅಧಿಕಾರಿಯೊಬ್ಬರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *