ರಾಮನಗರ: ಮದುವೆ ಮಾಡಿಕೊಳ್ತೇನೆ ಎಂದು ಗೃಹಿಣಿಯೋರ್ವಳನ್ನು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ ಯುವಕನ ಮನೆಯ ಮುಂದೆ ಗೃಹಿಣಿ ಧರಣಿ ಕುಳಿತಿರುವ ಘಟನೆ ಜಿಲ್ಲೆಯ ಬಸವನಪುರದಲ್ಲಿ ನಡೆದಿದೆ.
ನಿರ್ಮಲಾ ಮೋಸಕ್ಕೊಳಗಾದ ಗೃಹಿಣಿ. ನಿರ್ಮಲಾ ಬಸವನಪುರದ ಮಧುರ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಭರತ್ ಎಂಬ ಯುವಕನ ಪರಿಚಯವಾಗಿದೆ. ಮುಂದೆ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಸತಿ-ಪತಿಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಭರತ್ ಗೆ ಸರ್ಕಾರಿ ಕೆಲಸ ಸಿಕ್ಕಿತೆಂದು ಜಾತಿಯ ನೆಪವೊಡ್ಡಿ ಮದುವೆ ಆಗಲ್ಲ ಎಂದು ನಿರ್ಮಲಾರಿಂದ ದೂರವಾಗಿದ್ದಾನೆ.
ನಿರ್ಮಲಾ ಹೇಳೋದು ಹೀಗೆ: ನನಗೆ ಮೊದಲೇ ಮದುವೆಯಾಗಿ ಒಂದು ಮಗುವಿದೆ. ಆದರೆ ಕಾರಣಾಂತರಗಳಿಂದ ಪತಿಯಿಂದ ದೂರವಾಗಿ ಕಳೆದ ಐದು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದೆ. ಈ ನಡುವೆ ಒಂದೂವರೆ ವರ್ಷದ ಹಿಂದೆ ಕೆಲಸದ ಸ್ಥಳದಲ್ಲಿ ಭರತ್ ಎಂಬಾತನೊಂದಿಗೆ ಪರಿಚಯವಾಯಿತು. ನನಗೆ ಮೊದಲೇ ಒಂದು ಮಗುವಿದ್ದರೂ ಲೈಫ್ ಕೊಡ್ತಿನಿ ಅಂತಾ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇಷ್ಟಲ್ಲದೇ ನನ್ನಲ್ಲಿದ್ದ ಹಣವನ್ನು ಮೋಸದಿಂದ ಲಪಟಾಯಿಸಿದ್ದಾನೆ. ಒಂದೂವರೆ ವರ್ಷಗಳಿಂದ ನಾವಿಬ್ಬರೂ ಸಂಬಂಧದಲ್ಲಿದ್ದೇನೆ. ಈಗ ಸರ್ಕಾರಿ ಕೆಲಸ ಸಿಕ್ಕಿತು ಎಂದು ಹೇಳಿ ನಮ್ಮಿಬ್ಬರ ಜಾತಿ ಬೇರೆ ಎಂದು ನೆಪವೊಡ್ಡಿ ನನ್ನಿಂದ ದೂರವಾಗಿದ್ದಾನೆ ಎಂದು ನಿರ್ಮಲಾ ಹೇಳುತ್ತಾರೆ .
ಮೋಸಕ್ಕೊಳಗಾದ ನಿರ್ಮಲಾ ಮಹಿಳಾ ಸಂಘಟನೆಯ ಕಾರ್ಯಕರ್ತರ ಸಹಾಯದೊಂದಿಗೆ ಭರತ್ ಮನೆಯ ಮುಂದೆ ಧರಣಿ ಕುಳಿತಿದ್ದಾರೆ. ಮದುವೆಯಾಗಿದ್ರೂ ಸಹ ಗಂಡನಿಲ್ಲದಿದ್ದರಿಂದ ಮರುಮದುವೆಯಾಗ್ತೇನೆ ಎಂದು ನಂಬಿಸಿ ಹಣವನ್ನು ಕಿತ್ತುಕೊಂಡು, ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗಲ್ಲ ಎಂದು ಮೋಸ ಮಾಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಯುವಕನ ಮನೆಯ ಮುಂದೆ ಧರಣಿ ಕೂತಿದ್ದಾರೆ.