ಮಹಿಳಾ ಅಧಿಕಾರಿ ಮೇಲೆ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಹಲ್ಲೆ

Public TV
1 Min Read

ದಾವಣಗೆರೆ: ಮಹಿಳಾ ಅಧಿಕಾರಿ ಮತ್ತು ಅವರ ತಂದೆ ಮೇಲೆ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಹಲ್ಲೆ ಮಾಡಿದ ಘಟನೆ ದಾವಣಗೆರೆಯ ಜಿಲ್ಲೆಯ ಜಗಳೂರು ತಾಲೂಕು ವಲಯಾರಣ್ಯಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದಿದೆ.

ಉಪ ವಲಯಾರಣ್ಯಾಧಿಕಾರಿ ರಶ್ಮಿ ಮತ್ತು ತಂದೆ ತಿಮ್ಮರಾಜು ಹಲ್ಲೆಗೊಳಗಾದವರು. ಮಹಿಳಾ ಅಧಿಕಾರಿ ರಶ್ಮಿಗೆ ಪ್ರಾದೇಶಿಕ ವಲಯದಿಂದ ಸಾಮಾಜಿಕ ವಲಯಕ್ಕೆ ವರ್ಗವಾಗಿತ್ತು. ವರ್ಗಾವಣೆ ಬಳಿಕ ಬಾಕಿ ಇದ್ದ ಎಚ್‍ಆರ್‍ಎ, ಟಿಎ-ಡಿಎ ಕೇಳಲು ಕಚೇರಿಗೆ ಬಂದಾಗ ಜಗಳೂರು ಪ್ರಾದೇಶಿಕ ವಲಯಾರಣ್ಯಾಧಿಕಾರಿ ರಾಮಮೂರ್ತಿ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಮಗಳ ಮೇಲೆ ಹಲ್ಲೆ ನಡೆಸಿದ್ದನ್ನು ರಶ್ಮಿ ತಂದೆ ತಿಮ್ಮರಾಜು ಬಂದಾಗ ಅವರ ಮೇಲೇನೂ ಹಲ್ಲೆ ನಡೆಸಿದ್ದರು. ಆಗ ಬಿಡಿಸಿಕೊಳ್ಳಲು ಹೋದ ರಶ್ಮಿ ಮೇಲೂ ಹಲ್ಲೆ ಮಾಡಿ ಕೊಠಡಿಯಲ್ಲಿ ಕೂಡಿಹಾಕಲು ಯತ್ನಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ರಶ್ಮಿ ಹೆರಿಗೆ ರಜೆ ತೆರಳಿದ್ದಾಗ ಆರ್‍ಎಫ್‍ಒ ಬೇರೆಯವರಿಗೆ ಚಾರ್ಜ್ ಕೊಟ್ಟಿದ್ದರು. ಆಗ ರಶ್ಮಿಗೆ ಬರಬೇಕಿದ್ದ ಹಣ ಅಕ್ರಮವಾಗಿ ಡ್ರಾ ಮಾಡಿಕೊಂಡು ಬಳಕೆ ಮಾಡಿಕೊಂಡಿದ್ದಾರೆ.


8 ತಿಂಗಳಾದ್ರೂ ಎಲ್‍ಎಸ್‍ಪಿಸಿ ಮತ್ತು ಎಸ್‍ಆರ್ ಲೇಟರ್ ಸಹ ಬಂದಿಲ್ಲ. ಇನ್ನೂ ಅರಣ್ಯದಲ್ಲಿ ಮುಂಗಡ ಕಾಮಗಾರಿ ಮಾಡಿದ್ದ 8 ಲಕ್ಷ ಅನುದಾನ ಬಂದಿದೆ ಅದನ್ನು ಕೇಳಿದ್ರೆ ಅವಾಚ್ಯ ಶಬ್ಧಗಳಿಂದ ಮಾತಾಡ್ತಾರೆ ಅಂತ ರಶ್ಮಿ ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ರಶ್ಮಿ ಹಾಗೂ ತಂದೆ ತಿಮ್ಮರಾಜು ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಗಳೂರು ಪೊಲೀಸ್ ಠಾಣೆಗೆ ಹೋಗಿ ಆರ್‍ಎಫ್‍ಒ ವಿರುದ್ಧ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *