ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

Public TV
1 Min Read

ಚಂಡೀಗಢ: ಮಹಿಳೆಯೊಬ್ಬಳು ತಾನೇ ತಪ್ಪು ಮಾಡಿ, ಅಮಾಯಕ ಯುವಕನ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಪೊಲೀಸ್ ಬಂಧನದಲ್ಲಿದ್ದ ಆರೋಪಿ ಮಹಿಳೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾಳೆ.

ಮೊಹಾಲಿ ನಿವಾಸಿ ಶೀತಲ್ ಶರ್ಮಾ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿ. ಚಂಡೀಗಢ ನಿವಾಸಿ ನಿತೀಶ್ ಹಲ್ಲೆಗೆ ಒಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ನಿತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಿದ್ದೇನು?:
ಶೀತಲ್ ಟ್ರಿಬ್ಯೂನ್ ಚೌಕ್ ಬಳಿ ರ್ಯಾಶ್ ಆಗಿ ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ನಿತೀಶ್, ನಿಧಾನವಾಗಿ ಕಾರನ್ನು ರಿವರ್ಸ್ ಮಾಡುವಂತೆ ಬುದ್ಧಿ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಶೀತಲ್ ತನ್ನ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತಂದು ನಿತೀಶ್‍ಗೆ ಥಳಿಸಿದ್ದಾಳೆ. ಶೀತಲ್ ವರ್ತನೆಯಿಂದ ಕೋಪಗೊಂಡ ನಿತೀಶ್ ಕೂಡ ಕೈಗೆ ಸಿಕ್ಕ ವಸ್ತುವಿನಿಂದ ಮಹಿಳೆಯ ಕಾರಿಗೆ ಹೊಡೆದು ಗಾಜನ್ನು ಪುಡಿ ಮಾಡಿದ್ದಾರೆ.

ನಿತೀಶ್ ಹಾಗೂ ಶೀತಲ್ ಮಧ್ಯೆ ನಡೆಯುತ್ತಿದ್ದ ಗಲಾಟೆ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಈ ವಿಡಿಯೋವನ್ನು ಆಧಾರಿಸಿ ಪೊಲೀಸರು ಆರೋಪಿ ಶೀತಲ್‍ಳನ್ನು ಬಂಧಿಸಿ, ಐಪಿಸಿ ಸೆಕ್ಷನ್ 279 (ರ್ಯಾಸ್ ಡ್ರೈವಿಂಗ್), 323 (ಉದ್ದೇಶಪೂರ್ವಕವಾಗಿ ಹಲ್ಲೆ), 506 (ಜೀವ ಬೆದರಿಕೆ) ಮತ್ತು 336 (ಅನ್ಯರ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಶೀತಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *