ಮಗಳ ಫೀಸ್ ಕಟ್ಟಲು ತಂದ ಹಣ ಕಳೆದುಕೊಂಡ ಮಹಿಳೆ – ವಾಪಸ್ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ಪೊಲೀಸ್

Public TV
2 Min Read

ಯಾದಗಿರಿ: ಹಣ ಅಂದ್ರೆ ಹೆಣ ಕೂಡ ಬಾಯಿ ತೆಗೆಯುತ್ತೆ ಎಂಬ ಗಾದೆ ಮಾತಿದೆ. ಸಾಮಾನ್ಯವಾಗಿ ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳು ಸಿಕ್ಕರೆ ಯಾರು ಕೂಡ ಬೇಡ ಎನ್ನಲ್ಲ. ಜೊತೆಗೆ ಸಿಕ್ರೆ ಸಾಮಾನ್ಯವಾಗಿ ವಾಪಸ್ ಕೂಡ ಕೊಡಲ್ಲ. ಆದರೆ ಯಾದಗಿರಿ (Yadagiri) ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯ ಪೇದೆ ತಿರುಪತಿಗೌಡ ತಮಗೆ ರಸ್ತೆಯಲ್ಲಿ ಸಿಕ್ಕ ಹಣ (Money) ಹಾಗೂ ಇತರ ದಾಖಲಾತಿಗಳನ್ನು ಕಳೆದುಕೊಂಡವರಿಗೆ ವಾಪಸ್ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ (Kembhavi) ಈ ಘಟನೆ ನಡೆದಿದೆ. ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಚಿರಲದಿನ್ನಿ ಗ್ರಾಮದ ಕಸ್ತೂರಿ ಪಾಟೀಲ್ ಎಂಬ ಮಹಿಳೆ ಕೆಂಭಾವಿ ಪಟ್ಟಣಕ್ಕೆ ತನ್ನ ಮಗಳ ಖಾಸಗಿ ಶಾಲೆಯ ಅಡ್ಮಿಷನ್‌ಗಾಗಿ ಬಂದಿದ್ದಳು. ಮಗಳ ಶಾಲಾ ಶುಲ್ಕ ಕಟ್ಟಲು 10 ಸಾವಿರ ರೂ. ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಇತರ ಪ್ರಮುಖ ದಾಖಲಾತಿಗಳು ಇರುವ ಪರ್ಸ್ ಅನ್ನು ಜನಸಂದಣಿ ಇರುವ ಜಾಗದಲ್ಲಿ ಕಳೆದುಕೊಂಡಿದ್ದಳು.

ಕಸ್ತೂರಿ ಪಾಟೀಲ್ ತನ್ನ 10 ಸಾವಿರ ರೂ. ಹಣ ಹಾಗೂ ದಾಖಲಾತಿಗಾಗಿ ಬಹಳಷ್ಟು ಹುಡುಕಾಟ ನಡೆಸಿದ್ದಾಳೆ. ಆದರೆ ಹಣ ಹಾಗೂ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ. ಇದರಿಂದ ಕಸ್ತೂರಿ ಪಾಟೀಲ್ ಚಿರಲದಿನ್ನಿ ಗ್ರಾಮಕ್ಕೆ ವಾಪಸ್ ಹೋಗಿದ್ದಾಳೆ. ಇದನ್ನೂ ಓದಿ: ತಂದೆಯಿಂದಲೇ ಮಗಳಿಗೆ ಅಧಿಕಾರ ಹಸ್ತಾಂತರ – ಮಂಡ್ಯ ಸೆಂಟ್ರಲ್ ಠಾಣೆಯಲ್ಲೊಂದು ಅಪರೂಪದ ಸನ್ನಿವೇಶ

ಮಹಿಳೆ ಕಳೆದುಕೊಂಡ 10 ಸಾವಿರ ರೂ. ಹಣ ಹಾಗೂ ಇತರ ದಾಖಲಾತಿ ಇರುವ ಪರ್ಸ್ ಕೆಂಭಾವಿ ಪೋಲಿಸ್ ಠಾಣೆಯ ಕಾನ್ಸ್‌ಟೇಬಲ್ ತಿರುಪತಿಗೌಡ ಅವರ ಕೈಗೆ ಸಿಕ್ಕಿದೆ. ಆಗ ಪೇದೆ ತಿರುಪತಿಗೌಡ ಪರ್ಸ್‌ನಲ್ಲಿದ್ದ ಆಧಾರ್ ಕಾರ್ಡ್ ಅನ್ನು ನೋಡಿದಾಗ ಮುದ್ದೇಬಿಹಾಳ ತಾಲೂಕು ಎಂಬ ವಿಳಾಸವನ್ನು ಗಮನಿಸಿದ್ದಾರೆ. ಆಗ ಅವರು ಮುದ್ದೇಬಿಹಾಳ ಠಾಣೆಗೆ ಸಂಪರ್ಕಿಸಿ, ಕಸ್ತೂರಿ ಪಾಟೀಲ್ ಅವರ ಮಾಹಿತಿಯನ್ನು ಪಡೆಯುತ್ತಾರೆ.

ನಂತರ ಪೇದೆ ಮುದ್ದೇಬಿಹಾಳ ತಾಲೂಕಿನ ಚಿರಲದಿನ್ನಿ ಗ್ರಾಮದ ಕಸ್ತೂರಿ ಪಾಟೀಲ್ ಅವರ ಗಂಡನಿಗೆ ಫೋನ್ ಮಾಡಿ, ಮಹಿಳೆಯನ್ನು ಸಂಪರ್ಕಿಸಿದ್ದಾರೆ. ಬಳಿಕ 10 ಸಾವಿರ ರೂ. ಹಣ ಹಾಗೂ ಪ್ರಮುಖ ದಾಖಲೆಗಳನ್ನು ಕಸ್ತೂರಿ ಪಾಟೀಲ್ ಅವರಿಗೆ ವಾಪಸ್ ನೀಡಿ ಪೇದೆ ತಿರುಪತಿಗೌಡ ಆದರ್ಶ ಮೆರೆದಿದ್ದಾನೆ. ಪೊಲೀಸ್ ಕಾನ್‌ಸ್ಟೇಬಲ್ ತಿರುಪತಿಗೌಡ ಅವರ ಆದರ್ಶದ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣದಿಂದ ಜು.1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ: ಸಿಎಂ

Share This Article