ರಾಯಚೂರು: ಚಲಿಸುತ್ತಿದ್ದ ರೈಲು ಏರಲು ಹೋಗಿ ಮಹಿಳೆಯೊಬ್ಬರು ತಮ್ಮ ಎರಡೂ ಕಾಲು ಕಳೆದುಕೊಂಡಿರುವ ಘಟನೆ ರಾಯಚೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಪದ್ಮಮ್ಮ ಎರಡೂ ಕಾಲು ಕಳೆದುಕೊಂಡ ನತದೃಷ್ಟ ಮಹಿಳೆ. ಬೆಂಗಳೂರಿನಿಂದ ರಾಯಚೂರು ಮಾರ್ಗವಾಗಿ ಪುಣೆಗೆ ಹೊರಟಿದ್ದ ಉದ್ಯಾನ್ ಎಕ್ಸಪ್ರೆಸ್ ರೈಲು ಏರಲು ಹೋಗಿ ಅವಘಡ ನಡೆದಿದೆ.
ಕೂಲಿ ಕೆಲಸಕ್ಕಾಗಿ ಪುಣೆಗೆ ಗುಳೆ ಹೋಗುತ್ತಿದ್ದ ಮಹಿಳೆ ಅವಘಡದಲ್ಲಿ ಕಾಲು ಕಳೆದುಕೊಂಡಿದ್ದಾರೆ. ಪುಣೆಯಲ್ಲಿ ಪದ್ಮಮ್ಮ ಅವರ ಮಕ್ಕಳು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಪುಣೆಗೆ ಪ್ರಯಾಣ ಬೆಳೆಸಿದ್ದರು. ಪ್ರಸ್ತುತ ಪದ್ಮಮ್ಮ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.