ಕೊಪ್ಪಳ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮಳೆ ಇಲ್ಲದೇ ರೈತರು ಕಂಗಾಲಾಗುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಮಳೆಗಾಗಿ ತಪಸ್ಸು ಕುಳಿತಿದ್ದಾರೆ.
ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದ ಹುಲಿಗೆಮ್ಮ ಎಂಬ ಮಹಿಳೆ ತಾಲೂಕಿನ ಬಿಕನಳ್ಳಿ ಗ್ರಾಮದ ಬಳಿ ಊಟ ನೀರು ಬಿಟ್ಟು ಮೌನ ಅನುಷ್ಠಾನಕ್ಕೆ ಕುಳಿತ್ತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಮಳೆ ಇಲ್ಲದೇ ಈ ಭಾಗದ ರೈತರು ದೇವರ ಮೊರೆಹೋಗಿದ್ದು, ಪ್ರತಿ ಗ್ರಾಮದಲ್ಲಿ ಮಳೆಗಾಗಿ ಪೂಜೆ ಪುನಸ್ಕಾರ ನಡೆಯುತ್ತಲೆ ಇದೆ.
ಹುಲಿಗೆಮ್ಮ ಕೂಡ ಮಳೆಗಾಗಿ ಪದಹಾಡುವ ಕಾಯಕದಲ್ಲಿ ತೊಡಗಿದ್ದರು. ಎಂದಿನಂತೆ ಬಿಕನಳ್ಳಿ ಗ್ರಾಮದಲ್ಲಿ ಮಳೆ ಪದ ಹಾಡಿ ಗ್ರಾಮಕ್ಕೆ ಮರಳುವ ಸಂದರ್ಭದಲ್ಲಿ ಏಕಾಏಕಿ ಗ್ರಾಮದ ಹಳ್ಳದ ಪಕ್ಕದಲ್ಲಿ ಅನುಷ್ಠಾನಕ್ಕೆ ಕುಳಿತು ನನಗೆ ದೇವರ ವಾಣಿಯಾಗಿದೆ. ಮಳೆ ಬರುವವರೆಗೂ ನಾನು ಇಲ್ಲೆ ಕೂಡುವೆ, 5 ದಿನದಲ್ಲಿ ಮಳೆಯಾಗುತ್ತೇ ಎಂದು ಕಳೆದ ದಿನ ಬೆಳಗ್ಗೆ 5 ಗಂಟೆಯಿಂದ ಒಂದು ತೊಟ್ಟು ನೀರು ಆಹಾರ ಸೇವಿಸದೇ ಮೌನ ಅನುಷ್ಠಾನಕ್ಕೆ ಕುಳಿತಿದ್ದಾರೆ. ಈ ಹುಲಿಗೆಮ್ಮ ಎರಡು ವರ್ಷದ ಹಿಂದೆ ಇದೇ ರೀತಿ ಮಳೆ ಕೈಕೊಟ್ಟಾಗ ಮೈನಳ್ಳಿ ಗ್ರಾಮದಲ್ಲಿ ದ್ಯಾವಮ್ಮ ದೇವಿಗೆ ಕೋಣ ಬಿಡಿ ಎಂದು ಹೇಳಿದಾಗ ಗ್ರಾಮಸ್ಥರು ಕೋಣ ಬಿಟ್ಟ ಬೆನ್ನಲ್ಲೆ ಮಳೆ ಸುರಿದಿತಂತೆ.
ಕಳೆದ ವರ್ಷ ಕೂಡ ಹಿರೇಸಿಂದೋಗಿ ಗ್ರಾಮದ ಮರಳಸಿದ್ದೇಶ್ವರ ದೇವಸ್ಥಾನದಲ್ಲಿ ಅನಿಷ್ಠಾನಕ್ಕೆ ಕುಳಿತು ದೇವರನ್ನು ಹೊಳೆ ಪೂಜೆ ಮಾಡಿಸಿ ತನ್ನಿ ಮಳೆಯಾಗುತ್ತೇ ಎಂದು ಹೇಳಿದ್ದರಂತೆ. ಆಗಲೂ ಕೂಡ ಮಳೆ ಸುರಿದಿತ್ತು. ಈ ಬಾರಿಯೂ ಕೂಡ ಬಿಕನಳ್ಳಿ ಗ್ರಾಮದಲ್ಲಿ ಬಂದು ಅನುಷ್ಠಾನಕ್ಕೆ ಕುಳಿತಿದ್ದು, ಈ ಬಾರಿಯೂ ಕೂಡ ಮಳೆಯಾಗುತ್ತೆ ಎಂದು ನಂಬಿದ ಸುತ್ತಮುತ್ತಲಿನ ಗ್ರಾಮಸ್ಥರು, ಅನುಷ್ಠಾನಕ್ಕೆ ಕುಳಿತ ಸ್ಥಳಕ್ಕೆ ಬಂದು ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ನಿರಂತರವಾಗಿ ಮಹಿಳೆಯರಿಂದ ಮಳೆ ಪದ ಹಾಗೂ ಭಜನೆ ನಡೆಸಿಕೊಂಡು ಗ್ರಾಮಸ್ಥರು ಬರುತ್ತಿದ್ದಾರೆ.